ಕೊರೋನ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರಕಾರಕ್ಕೆ ಸೋಂಕು ಪರೀಕ್ಷೆ ನಡೆಸಲು ಗೊತ್ತಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

Update: 2020-07-06 15:36 GMT

ಬೆಂಗಳೂರು, ಜು. 6: `ಕೊರೋನ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಎಂದು ದಿನಕ್ಕೆರಡು ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರು ಅಬ್ಬರಿಸುತ್ತಿದ್ದಾರೆ. ಸ್ಯಾಂಪಲ್‍ಗಾಗಿ ಒಂದೆರಡು ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಾರದೇಕೇ? ಸರಕಾರ ಯಾರಿಗೆ ಮತ್ತು ಏಕೆ ಹೆದರುತ್ತಿದೆ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಎಂದರೆ ಸೋಂಕು ಪರೀಕ್ಷೆ ಎನ್ನುವುದನ್ನು ವಿಶ್ವದಾದ್ಯಂತ ವೈದ್ಯರು-ತಜ್ಞರು ಹೇಳುತ್ತಲೇ ಇದ್ದಾರೆ. ಕೊರೋನ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರಕಾರಕ್ಕೆ ಸೋಂಕು ಪರೀಕ್ಷೆಯನ್ನು ಸರಿಯಾಗಿ ನಡೆಸಬೇಕೆಂದು ಮಾತ್ರ ಗೊತ್ತಾಗಿಲ್ಲ' ಎಂದು ಟೀಕಿಸಿದ್ದಾರೆ.

`ರಾಜ್ಯದಲ್ಲಿ ಕೊರೋನ ಪರೀಕ್ಷಾ ಕೇಂದ್ರಗಳಿರುವುದು ಕೇವಲ 59. ಅವುಗಳು ದಿನದ ಪರೀಕ್ಷಾ ಸಾಮರ್ಥ್ಯ 31,116, ಈಗ ಪ್ರತಿದಿನ ನಡೆಯುತ್ತಿರುವುದು ಕೇವಲ 13,910 ಪರೀಕ್ಷೆ ಮಾತ್ರ. ಅಂದರೆ ಒಟ್ಟು ಸಾಮರ್ಥ್ಯದ ಶೇ.44.7ರಷ್ಟು ಮಾತ್ರ ಬಳಕೆ. ರಾಜ್ಯ ಸರಕಾರದ ಅಯೋಗ್ಯತೆಗೆ ಬೇರೆ ಸಾಕ್ಷಿ ಬೇಕೇ?' ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

`ಕೊರೋನ ಸೋಂಕು ಪರೀಕ್ಷೆ ಹೆಚ್ಚು ನಡೆಸಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಆಗ ಅದೇ ಪ್ರಮಾಣದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೋಂಕು ಪರೀಕ್ಷೆ ಹೆಚ್ಚು ನಡೆಸುತ್ತಿಲ್ಲ. ಜನರ ಸಾವಿಗೆ ಕಾರಣವಾದ ಸರಕಾರವನ್ನು ಕೊಲೆಗಡುಕ ಸರಕಾರ ಎಂದರೆ ತಪ್ಪಾದೀತೇ?' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News