ಶಿವಮೊಗ್ಗ: ಮದ್ಯಪಾನಕ್ಕೆ ಹಣ ಕೊಡದ ಅಜ್ಜಿಯನ್ನು ಕುಡುಗೋಲಿನಿಂದ ಕೊಲೆಗೈದ ಮೊಮ್ಮಗ

Update: 2020-07-08 15:40 GMT

ಶಿವಮೊಗ್ಗ, ಜು.8: ಮದ್ಯಪಾನ ಮಾಡಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮೊಮ್ಮಗನೇ ಅಜ್ಜಿಯನ್ನು ಕುಡುಗೋಲಿನಿಂದ ಕೊಲೆ ಮಾಡಿದ ಘಟನೆ ಭದ್ರಾವತಿ ತಾಲೂಕಿನ ತಾಶ್ಕೆಂಟ್ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಅರುಣ್‌ ಕುಮಾರ್ (28) ಕೊಲೆ ಆರೋಪಿ. ಕಿಟ್ಟಮ್ಮ (75) ಮೃತ ವೃದ್ಧೆ. ಅರುಣ್‌ ಕುಮಾರ್ ತನ್ನ ಅಜ್ಜಿಯ ಮೇಲೆ‌ ಹಲ್ಲೆ ನಡೆಸುವುದನ್ನು ಕಂಡ ಪಕ್ಕದ ಮನೆಯ ಪಾಪಮ್ಮ(72) ತಡೆಯಲು ಬಂದಿದ್ದು, ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪಾಪಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರಗೆ ದಾಖಲಿಸಲಾಗಿದೆ. 

ಪಾಪಮ್ಮ ಅವರು ಅರುಣ್‌ ಕುಮಾರ್ ಸಂಬಂಧಿಯಾಗಿದ್ದು, ಕಿಟ್ಟಮ್ಮ ಮತ್ತು ಪಾಪಮ್ಮ ಅಕ್ಕ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಅರುಣ್‌ ಕುಮಾರ್ ತನ್ನ ಅಜ್ಜಿಗೆ ಬರುತ್ತಿದ್ದ ಪಿಂಚಣಿ ಹಣಕ್ಕೆ ಪೀಡಿಸುತ್ತಿದ್ದು, ಇಂದು ಮದ್ಯಪಾನಕ್ಕೆ ಹಣ ಕೊಡದ ಹಿನ್ನಲೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಆರೋಪಿ ಅರುಣ್‌ ಕುಮಾರ್ ನನ್ನು ಗ್ರಾಮಸ್ಥರು ಹಿಡಿದು ಕೈಕಾಲುಗಳನ್ನು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಹೊಸಮನೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News