ರೈತರ ಹಣ ಕಿತ್ತು ಆಶಾ ಕಾರ್ಯಕರ್ತೆಯರಿಗೆ ಕೊಡುವ ಸರ್ಕಾರದ ಕ್ರಮ ರೈತ ವಿರೋಧಿ: ಕಿಮ್ಮನೆ ರತ್ನಾಕರ್

Update: 2020-07-09 12:27 GMT

ಶಿವಮೊಗ್ಗ, ಜು.9: ರಾಜ್ಯ ಸರ್ಕಾರ ರೈತರ ಹಣವನ್ನು ಕಿತ್ತುಕೊಂಡು ಆಶಾ ಕಾರ್ಯಕರ್ತೆಯರಿಗೆ ನೀಡಲು ಮುಂದಾಗಿದೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಆಶಾ ಕಾರ್ಯಕರ್ತೆಯರಿಗೆ ದಾನದ ರೂಪದಲ್ಲಿ ಹಣ ನೀಡುವಂತೆ ಸರ್ಕಾರ ಆದೇಶ ಮಾಡಿದೆ. ಸಹಕಾರ ಸಂಘದಲ್ಲಿ ಇರುವುದು ರೈತರ ಷೇರು ಹಣ. ಈ ಹಣ ಆಶಾ ಕಾರ್ಯಕರ್ತೆಯರಿಗೆ ನೀಡಬೇಕು ಎಂದರೆ ಸರ್ಕಾರ ಏಕೆ ಬೇಕು. ಸಹಕಾರಿ ಸಂಘಗಳೇ ನೆಲಕಚ್ಚಿ ಹೋಗಿವೆ. ಹೀಗಿರುವಾಗ ರೈತರ ಹಣ ಕಿತ್ತುಕೊಂಡು ಆಶಾ ಕಾರ್ಯಕರ್ತೆಯರಿಗೆ ನೀಡಲು ಹೊರಟಿರುವ ಸರ್ಕಾರದ ಕ್ರಮ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಸರ್ಕಾರದ ಈ ಕ್ರಮ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ನೀಡಬೇಕು ಎಂದು ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.

ಜನ ಬೀದಿಯಲ್ಲಿ ಬಿದ್ದು ಸಾಯುತ್ತಿದ್ದಾರೆ
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಿಮ್ಮನೆ ರತ್ನಾಕರ್ ಅವರು, 1,700 ಕೋಟಿ ರೂಪಾಯಿ ಖರ್ಚು ಮಾಡಿ 17 ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರ ರಚಿಸಿದೆ. ಈಗ ಜನರು ಬೀದಿಯಲ್ಲಿ ಸಾಯುವಂತಹ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಸರ್ಕಾರ ಇದೆ ಎಂದೇ ಅನಿಸುತ್ತಿಲ್ಲ. ಇವರು ರಾಜೀನಾಮೆ ನೀಡಿ ಮನೆಗೆ ಹೋಗುವುದೇ ಒಳ್ಳೆಯದು ಎಂದು ಟೀಕಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಕೆಲಸ ಮಾಡುತ್ತಿದ್ದಾರೆ. ಉಳಿದವರು ಅರಾಮಾಗಿದ್ದಾರೆ. ಸಚಿವ ಸಂಪುಟದಲ್ಲಿ ಹೊಂದಾಣಿಕೆಯೇ ಇಲ್ಲ. ಲಾಕ್ ಡೌನ್ ಟೈಮಲ್ಲಿ ಶಂಕುಸ್ಥಾಪನೆಯ ಅಗತ್ಯವಿದೆಯೇ. ಎಲ್ಲರನ್ನು ಒಟ್ಟುಗೂಡಿಸಿ ಕೊಂಡು ಕಾರ್ಯಕ್ರಮ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. 

ಕಾಂಗ್ರೆಸ್ ನವರಿಗೆ ಮಾತ್ರ ಕೊರೋನ ಬರುತ್ತದೆಯೇ? ಬಿಜೆಪಿಯವರಿಗೆ ಬರುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರವಿವಾರ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಅಂದು ಬಿಜೆಪಿ ಸಚಿವರು ಹಾಗೂ ಶಾಸಕರು ಶಂಕುಸ್ಥಾಪನೆ ಕಾರ್ಯಕ್ರಮ ಮಾಡುತ್ತಾರೆ. ಹಾಗಾದರೆ ಲಾಕ್ ಡೌನ್ ಯಾರಿಗೆ. ಇದನ್ನು ನೋಡಿದರೆ ಈಶ್ವರಪ್ಪ ಅವರು ಸತ್ಯ ಹೇಳಿದ್ದಾರೆ ಅನಿಸುತ್ತೆ. ರಾಕ್ಷಸರಿಗೆ ಕೊರೋನ ಬರುವುದಿಲ್ಲ ಅಂತಾ ಸಮರ್ಥಿಸಿಕೊಂಡಿದ್ದರು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಪ್ರಸನ್ನಕುಮಾರ್, ಜಿಲ್ಲಾ ಪಂಚಾಉಯಗ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಹಾಪ್ಕಾಮ್ಸ್ ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಕಲಗೋಡು ರತ್ನಾಕರ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಯೋಗೀಶ್, ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News