ರೋಗದ ವಿರುದ್ಧ ಹೋರಾಡಲು ವ್ಯವಸ್ಥೆ ರೂಪಿಸಬೇಕು, ತಟ್ಟೆ ಬಾರಿಸಲು ಹೇಳುವುದಲ್ಲ: ನಿಜಗುಣಾನಂದ ಸ್ವಾಮೀಜಿ

Update: 2020-07-13 16:23 GMT

ಬೆಳಗಾವಿ, ಜು.13: ರೋಗದ ವಿರುದ್ಧ ಹೋರಾಡಲು ವ್ಯವಸ್ಥೆ ರೂಪಿಸಬೇಕೇ ಹೊರತು, ಕೈಗೆ ತಟ್ಟೆ ಕೊಟ್ಟು ಬಾರಿಸಿ ಎಂದು ಹೇಳುವುದಲ್ಲ ಎಂದು ಬೈಲೂರು ನಿಷ್ಕಲ್ಮಶ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಸೋಮವಾರ ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೂತನ ಕಾರು ಚಾಲನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೋಗದ ವಿರುದ್ಧ ಹೋರಾಟಕ್ಕೆ ವ್ಯವಸ್ಥೆ ರೂಪಿಸಬೇಕಿತ್ತು. ಆದರೆ, ಕೈಗೆ ತಟ್ಟೆ ನೀಡಿ ಬಾರಿಸಿ ಎಂದರು. ಇಡೀ ದೇಶವೆ ತಟ್ಟೆಯನ್ನು ಬಾರಿಸಿತು. ಇದಕ್ಕೆ ಕೆಲ ಸ್ವಾಮೀಜಿಗಳು ಕೈಜೋಡಿಸಿದರು. ಅಲ್ಲದೆ, ಜನರಿಗೆ ವಿಜ್ಞಾನ-ತಂತ್ರಜ್ಞಾನ ಅರಿವನ್ನು ಕೊಡಬೇಕಿದ್ದ ಇಂದಿನ ಸಮಾಜದಲ್ಲಿ ತಟ್ಟೆ ಬಾರಿಸಿ ಎಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.

ದೇಶದ ಯುವಕರ ಕೈಯಲ್ಲಿ ಧರ್ಮದ ಧ್ವಜವನ್ನು ನೀಡಿ ದ್ವೇಷವನ್ನು ಬೆಳೆಸುವ ಬದಲಿಗೆ ಕಾಯಕದ ಧ್ವಜವನ್ನು ನೀಡಬೇಕು ಎಂದ ಅವರು, ಇಂದು ದೇಶದಲ್ಲಿ ಶಬ್ದ ಆಳುತ್ತಿದೆ. ಅದನ್ನು ಆಳುತ್ತಿರೋರು ಪೂಜಾರಿಗಳು, ಪಂಚಾಂಗದವರು. ಇವರೆಲ್ಲರೂ ಶಬ್ದದ ಮೇಲೆ ಜಗತ್ತನ್ನು ಕಟ್ಟುತ್ತಾರೆ ಎಂದರು.

ಜಗತ್ತಿನ ಕಷ್ಟಕ್ಕೆ ದೇವರು ಪರಿಹಾರವಲ್ಲ. ಪರಿಹಾರ ಆಗಿದ್ದರೆ, ಭೂಮಿಯಲ್ಲಿ ಯಾರಿಗೂ ಕಷ್ಟವೇ ಇರುತ್ತಿಲ್ಲ. ಆದರೆ, ನಮ್ಮ ಕಷ್ಟಕ್ಕೆ ಬುದ್ಧಿಮತ್ತೆ, ಅರಿವೇ ಪರಿಹಾರ ಎಂಬುದನ್ನು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಸಮಾಜದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಭಯ, ಭಕ್ತಿ ಹಾಗೂ ಬದುಕಬೇಕೆಂಬ ನಿಮ್ಮೆಲ್ಲರ ಆಸೆಗಳನ್ನೇ ನಮ್ಮಂಥ ಸ್ವಾಮೀಜಿಗಳು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು.

ದೇಶದ ಜನರಲ್ಲಿ ಇಂದಿನ ಆಧುನಿಕತೆಯ ಯುಗದಲ್ಲಿಯೂ ಕೆಳಮಟ್ಟದ ವಿಚಾರಧಾರೆಗಳಿವೆ. ಹೀಗಾಗಿ, ಸಮಾಜದಲ್ಲಿ ಇಂದು ಕೂಡ ಅಂಧಶ್ರದ್ಧೆ, ಕಂದಾಚಾರ ಹಾಗೂ ಮೂಢನಂಬಿಕೆಗಳು ಜನರಲ್ಲಿ ನೆಲೆಯೂರಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News