ದಲಿತ ಯುವಕನ ಗುಂಡಿಕ್ಕಿ‌ ಹತ್ಯೆಗೈದ ದುಷ್ಕರ್ಮಿ

Update: 2020-07-15 15:38 GMT
ಹತ್ಯೆಯಾದ ಮಧು

ಆಲೂರು, ಜು.15: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಲಿತ ಯುವಕನೊರ್ವನನ್ನು ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೊಪ್ಪಿನಹಳ್ಳಿ ಗ್ರಾಮದ ಮಧು ಎಂಬ ಯುವಕ ಕೊಲೆಯಾಗಿದ್ದು, ಈತ ಬೈಕ್ ನಲ್ಲಿ‌ ಸೊಪ್ಪಿನಹಳ್ಳಿ ಗ್ರಾಮದಿಂದ ಬೈರಾಪುರ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ರೂಪೇಶ್ ಎಂಬಾತ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.‌ ಆರೋಪಿ ತಲೆ ಮರೆಸಿಕೊಂಡಿದ್ದಾನೆ. 

ಹತ್ಯೆ ಆರೋಪಿ ರೂಪೇಶ್ ನ ಅಣ್ಣ ರಮೇಶ್ ಎಂಬವರ ಮಗಳನ್ನು ಕೊಲೆಯಾದ ಮಧು ಎಂಬಾತ ಅಪಹರಿಸಿಕೊಂಡು ಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಮಧು ಮೇಲೆ ಕೇಸು ದಾಖಲಾಗಿ ಜೈಲಿಗೂ ಹೋಗಿ ಬಂದಿದ್ದನೆಂದು ತಿಳಿದುಬಂದಿದೆ. ಇದೇ ದ್ವೇಷದಿಂದ ಮಧುನನ್ನು ರೂಪೇಶ್ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಡಿವೈಎಸ್ಪಿ ಗೋಪಿ, ಪಿಐ ರೇವಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಲೆ ಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದ‌ ಕೂಡಲೇ ತಾಲೂಕಿನ ದಲಿತ ಸಂಘಟನೆಗಳು ಸ್ಥಳಕ್ಕೆ ದೌಡಾಯಿಸಿ ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ತಾಲೂಕು ಹಾಗೂ ಜಿಲ್ಲೆಯ ದಲಿತ ಸಂಘಟನೆಯ ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News