ಕೊರೋನ ನಾಗಾಲೋಟ: 24 ಗಂಟೆಗಳಲ್ಲಿ 104 ಸಾವು, 4 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢ

Update: 2020-07-17 11:47 GMT

ಬೆಂಗಳೂರು, ಜು.16: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಇದೇ ಮೊದಲ ಬಾರಿಗೆ 4 ಸಾವಿರಕ್ಕೂ ಅಧಿಕ ಪಾಸಿಟಿವ್ ಮತ್ತು ನೂರಕ್ಕೂ ಅಧಿಕ ಸಾವಿನ ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್19 ಅಟ್ಟಹಾಸ ಮೆರೆಯುತ್ತಿದೆ. 

ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ ಮತ್ತೆ 4169 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 51,422 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 104 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 1,032ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 70 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ 7, ಕೋಲಾರ 6, ಬಾಗಲಕೋಟೆ 5 ಮೈಸೂರು 3, ಬೆಳಗಾವಿ 3, ಬಳ್ಳಾರಿ 4, ಬೀದರ್ 2, ಹಾಸನ 2, ಕಲಬುರಗಿ ಮತ್ತು ಮಂಡ್ಯದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2,344, ದಕ್ಷಿಣ ಕನ್ನಡ 238, ಧಾರವಾಡ 176, ವಿಜಯಪುರ 144, ಮೈಸೂರು 130, ಕಲಬುರಗಿ 123, ಉಡುಪಿ 113, ರಾಯಚೂರು 101, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕಬಳ್ಳಾಪುರ 77, ಬೀದರ್ 53, ಶಿವಮೊಗ್ಗ 46, ಗದಗ  44, ಬಳ್ಳಾರಿ 44, ಕೋಲಾರ 43, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಬೆಂಗಳೂರು ಗ್ರಾಮಾಂತರ 31, ಹಾಸನ 31, ಚಿಕ್ಕಮಗಳೂರು  30, ದಾವಣಗೆರೆ 25, ಚಿತ್ರದುರ್ಗ 21, ಹಾವೇರಿ 18, ಕೊಡಗು 18, ಚಾಮರಾಜನಗರ 16, ತುಮಕೂರು 12, ಮಂಡ್ಯ 11, ರಾಮನಗರದಲ್ಲಿ 4 ಪ್ರಕರಣ ಪಾಸಿಟಿವ್ ಬಂದಿದೆ

ಒಟ್ಟಾರೆ ರಾಜ್ಯದಲ್ಲಿ 51,422 ಕೊರೋನ ಸೋಂಕಿತರ ಪೈಕಿ 19,729 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 1,263 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 1032 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 30,655 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News