ಕೋವಿಡ್ ಸೋಂಕಿತರ ಮೃತದೇಹ ದಫನ್ ಮಾಡಲು ನಿರಾಕರಿಸುವಂತಿಲ್ಲ: ರಾಜ್ಯ ವಕ್ಫ್ ಬೋರ್ಡ್ ಆದೇಶ
ಬೆಂಗಳೂರು, ಜು.16: ಕೋವಿಡ್-19 ಸೋಂಕಿನಿಂದ ಮೃತಪಡುವ ಮುಸ್ಲಿಮರ ಪಾರ್ಥಿವ ಶರೀರವನ್ನು ದಫನ್ ಮಾಡಲು ಯಾರೊಬ್ಬರೂ ನಿರಾಕರಿಸುವಂತಿಲ್ಲ ಎಂದು ರಾಜ್ಯದ ಎಲ್ಲ ವಕ್ಫ್ ನೋಂದಾಯಿತ ಹಾಗೂ ನೋಂದಣಿಯಾಗಿರದ ಸಂಸ್ಥೆಗಳ ಆಡಳಿತ ಸಮಿತಿಗಳು, ಮುತವಲ್ಲಿ ಹಾಗೂ ಆಡಳಿತಾಧಿಕಾರಿಗಳಿಗೆ ರಾಜ್ಯ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ.
ಕೋವಿಡ್ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಸರಕಾರದಿಂದ ನಿಯೋಜಿಸಲ್ಪಟ್ಟಿರುವ ನೋಡಲ್ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಬೇಕು. ಯಾರಾದರೂ ಈ ಕಾರ್ಯಕ್ಕೆ ಸಹಕಾರ ನೀಡದಿದ್ದರೆ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು. ಅಲ್ಲದೆ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಎಚ್ಚರಿಕೆ ನೀಡಿದ್ದಾರೆ.
ವಕ್ಫ್ ಅಧಿಕಾರಿಗಳು, ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ವಕ್ಫ್ ಬೋರ್ಡ್ ನ ಈ ಆದೇಶದ ಅನುಷ್ಠಾನಕ್ಕಾಗಿ ಶ್ರಮಿಸಬೇಕು. ಅಲ್ಲದೆ, ಈ ಸುತ್ತೋಲೆಯನ್ನು ರಾಜ್ಯದ ಎಲ್ಲ ಖಬರಸ್ಥಾನ್ ಸಮಿತಿಗಳಿಗೆ ತಲುಪಿಸುವಂತೆ ಅವರು ಆದೇಶದಲ್ಲಿ ಸೂಚಿಸಿದ್ದಾರೆ.