ಸಾಲ ಮನ್ನಾ ಮಾಡಲಿಲ್ಲ ಎಂದು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ

Update: 2020-07-21 16:07 GMT

ಮಂಡ್ಯ, ಜು.21: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಡಳಿತದಲ್ಲಿ ರೈತರಿಗೆ ಮಾಡಲಾದ ಸಾಲ ಮನ್ನಾ ಯೋಜನೆಯಡಿ ತನ್ನ ಸಾಲ ಮನ್ನಾ ಮಾಡದೆ, ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ರೈತರೊಬ್ಬರು ಮಂಗಳವಾರ ನಗರದ ಕೆ.ಆರ್.ವೃತ್ತದ ಬಳಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಮದ್ದೂರು ತಾಲೂಕಿನ ಬಿದರಮೊಳೆ ಗ್ರಾಮದ ಮೋಹನ್ ಆತ್ಮಹತ್ಯೆ ಬೆದರಿಕೆ ಹಾಕಿದ ರೈತ. ಬೆಕ್ಕಳಲೆ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಸಾಲ ತೆಗೆದುಕೊಂಡಿದ್ದು, ಸಾಲಮನ್ನಾ ಯೋಜನೆಯಡಿ ತನ್ನ ಸಾಲಮನ್ನಾ ಮಾಡದೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಮೋಹನ್ ಆರೋಪವಾಗಿದೆ.

ಈ ಬಗ್ಗೆ ತಾನು ಕಾನೂನು ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಆತ್ಮಹತ್ಯೆಗೆ ಮುಂದಾಗಿದ್ದೇನೆ. ತನ್ನ ಸಾವಿಗೆ ಬೆಕ್ಕಳಲೆ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಇಒ, ಆಡಳಿತ ಮಂಡಳಿ, ಕೊಪ್ಪ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು ಹಾಗೂ ಸಹಕಾರ ಸಂಘಗಳ ಸಹಾಯ ನಿಬಂಧಕರು ಕಾರಣರೆಂದು ಪತ್ರ ಬರೆದು ಮೋಹನ್ ಟವರ್ ಏರಿದ್ದರು.

ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರೈತನ ಮನವೊಲಿಸಿ ಆತನನ್ನು ಟವರ್ ನಿಂದ ಕೆಳಗಿಳಿಸಿ ಆತಂಕ ದೂರ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News