ರೇಷ್ಮೆ ರೀಲರ್ ಗಳ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಎಚ್.ಡಿ.ಕುಮಾರಸ್ವಾಮಿ

Update: 2020-07-23 13:06 GMT

ಬೆಂಗಳೂರು, ಜು. 23: ರೇಷ್ಮೆಗೂಡು ಖರೀದಿಗೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ರೀಲರ್ ಗಳ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ, ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ರಾಮನಗರ ಜಿಲ್ಲೆ ವ್ಯಾಪ್ತಿಯ ರೇಷ್ಮೆ ರೀಲರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಕುಮಾರಸ್ವಾಮಿ, ರೇಷ್ಮೆ ರೀಲರ್ ಗಳ ಸಮಸ್ಯೆ ಆಲಿಸಿದರು. ಆರೇಳು ತಿಂಗಳಿಂದ ಸಮಸ್ಯೆಗೆ ಸಿಲುಕಿರುವ ರೇಷ್ಮೆ ರೀಲರ್ ಗಳತ್ತ ಸರಕಾರ ತಿರುಗಿ ನೋಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರೀಲರ್ ಗಳ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಪ್ರಸ್ತಾಪಿಸುತ್ತೇನೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೂ ತರಲಾಗುವುದು. ರೇಷ್ಮೆ ರೀಲರ್ ಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ರೇಷ್ಮೆ ರೀಲರ್ ಗಳಾದ ಮುಹೀಬ್ ಪಾಷಾ, ಡಿ.ಆರ್ ರಮೇಶ್, ನಾಸೀರ್ ಬೇಗ್, ರಮೇಶ್, ಫರ್ವೀಝ್, ಮೌಸೀನ್ ಪಾಷಾ ಸೇರಿದಂತೆ ಹಲವರು ವೀಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News