ಬಿಎಸ್ವೈ ಸರಕಾರದ ವರ್ಷದ ಸಾಧನೆಗೆ ನೊಬೆಲ್ ಮಾದರಿ ಪ್ರಶಸ್ತಿ ನೀಡಬೇಕು: ಆಮ್ ಆದ್ಮಿ ಪಕ್ಷ ಲೇವಡಿ
ಬೆಂಗಳೂರು, ಜು. 26: ಪ್ರವಾಹ ಸಂತ್ರಸ್ತರಿಗೆ ನೆಲೆ ಕಲ್ಪಿಸದೆ, ಉಪಚುನಾವಣೆಯಲ್ಲಿ ಕೋಟ್ಯಂತರ ರೂ.ದುರ್ಬಳಕೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರ ಬೀದಿಪಾಲು, ಕೊರೋನ ಸಂದಿಗ್ಧ ಸಂದರ್ಭದಲ್ಲಿ ಉಪಕರಣ ಖರೀದಿ ಅವ್ಯವಹಾರ ಸೇರಿದಂತೆ ಇಷ್ಟೆಲ್ಲಾ ಸಾಧನೆಗಳನ್ನು ಕೇವಲ 1 ವರ್ಷದಲ್ಲಿ ಸಾಧಿಸಿದ ಬಿಜೆಪಿ ಸರಕಾರದ ಉತ್ತಮ ಆಡಳಿತಕ್ಕೆ ನೊಬೆಲ್ ಪ್ರಶಸ್ತಿಗೆ ಸಮಾನಾಂತರವಾದ ಬೇರೆ ಯಾವುದಾದರೂ ಪ್ರಶಸ್ತಿಯನ್ನು ಸಿಎಂ ಬಿಎಸ್ವೈಗೆ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಲೇವಡಿ ಮಾಡಿದೆ.
ಸ್ವಾಭಿಮಾನ ಅಡ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೆಡವಲು ಅನೇಕ ತಿಂಗಳುಗಳಿಂದ ಹೊಂಚು ಹಾಕಿ ಅಸಾಂವಿಧಾನಿಕ ಆಪರೇಷನ್ ಕಮಲದ ಮೂಲಕ ಕುಮಾರಸ್ವಾಮಿ ಸರಕಾರ ಕೆಡವಿ ಕುರ್ಚಿ ಕಸಿದುಕೊಂಡ ಯಡಿಯೂರಪ್ಪ ಸರಕಾರ 1 ವರ್ಷ ಪೂರೈಸಿದೆ. ಅನರ್ಹ ಶಾಸಕರ ಉಪಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಸಾವಿರಾರು ಕೋಟಿ ರೂ.ಅಭಿವೃದ್ಧಿ ಅನುದಾನಗಳ ಆಮಿಷಗಳನ್ನೊಡ್ಡಿ ಮಂಕುಬೂದಿ ಎರಚಿ ದೇಶದಲ್ಲಿ ಇದರಿಂದ ಎಲ್ಲ ವಿಚಾರಗಳಲ್ಲೂ ಮಾದರಿಯಾಗಿದ್ದ ಕರ್ನಾಟಕವನ್ನು ಹಾಳುಗೆಡವಿದ್ದೇ ಇವರ ಸಾಧನೆ ಎಂದು ಟೀಕಿಸಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ 21 ಜಿಲ್ಲೆಗಳು ಭೀಕರ ನೆರೆಗೆ ತುತ್ತಾಗಿ ಜನರ ಬದುಕು ಮೂರಾಬಟ್ಟೆ ಆಯಿತು, ಇಂತಹ ಸಂದರ್ಭದಲ್ಲಿ ಕೇಂದ್ರದಿಂದ ಪುಡಿಗಾಸು ಪರಿಹಾರ ತರಲು ದೈನೇಸಿ ಪರಿಸ್ಥಿತಿಗೆ ತಲುಪಿ ರಾಜ್ಯದ ಸ್ವಾಭಿಮಾನವನ್ನು ಅಡವಿಟ್ಟಿದ್ದು ರಾಜ್ಯ ಬಿಜೆಪಿ ಸರಕಾರದ ಒಂದು ವರ್ಷದ ಸಾಧನೆ ಎಂದು ಟೀಕಿಸಿದೆ.
ಬೆನ್ನಿಗೆ ಚೂರಿ: ಸರಕಾರ ರಚನೆಯಾಗಿ 1 ತಿಂಗಳಾದರೂ ಸಂಪುಟ ರಚಿಸದೇ ಸಾಧನೆ ಮಾಡಿದ ಯಡಿಯೂರಪ್ಪ, ಕೊರೋನ ಸಂಕಷ್ಟದ ಕಾಲದಲ್ಲಿ ದೇಶವು ಸ್ವಾತಂತ್ರ್ಯ ಬಂದು ಅನೇಕ ಹೋರಾಟಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕಾಗಿ ರೂಪಿತವಾದ ಅನೇಕ ಕಾನೂನುಗಳನ್ನು ನುಂಗಿ ನೀರು ಕುಡಿದಿರುವುದು ಒಂದು ವರ್ಷದ ಅಮೋಘ ಸಾಧನೆ. ಭೂ ಸುಧಾರಣಾ ಕಾಯ್ದೆಯ ಮೂಲಕ ರೈತರನ್ನು ಈ ಸರಕಾರ ಬೀದಿಗೆ ತಳ್ಳಿದೆ. ಕೃಷಿಕರ, ಸಣ್ಣಪುಟ್ಟ ವರ್ತಕರ ಕತ್ತು ಹಿಸುಕಿದ ಭೂಸುಧಾರಣೆ, ಎಪಿಎಂಸಿ ತಿದ್ದುಪಡಿ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭ ಮಾಡಿ ಕೊಡುವ ಉದ್ದೇಶ ಗುಟ್ಟಾಗೇನು ಉಳಿದಿಲ್ಲ ಎಂದು ಟೀಕಿಸಿದೆ.
ಸುಳ್ಳು ಭರವಸೆ: ಮಹಿಳೆಯರಿಗೆ ಉಚಿತ ಬಸ್ಪಾಸ್, ಬೆಂಗಳೂರು ನಗರದ ಬಡವರಿಗೆ 10 ಸಾವಿರ ಲೀ.ಉಚಿತ ಕುಡಿಯುವ ನೀರು ಹೀಗೆ ಅನೇಕ ಹುಸಿ ಭರವಸೆಗಳನ್ನು ನೀಡಿ ಆನಂತರ ಹಣವಿಲ್ಲ ಎಂದು ಜನರಿಗೆ ದ್ರೋಹ ಬಗೆದಿದೆ. ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳುತ್ತಾ ಬೆಂಗಳೂರು ನಗರದಲ್ಲೇ ನೀರಿನ ಪೈಪ್ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರೂ ಕೋಟಿ ರೂ.ಕಾಮಗಾರಿ ನಡೆಸಿ ಆಪರೇಷನ್ ಕಮಲದಿಂದ ಬಂದ ಮಂತ್ರಿಗಳ, ಗುತ್ತಿಗೆದಾರರ ಜೇಬು ತುಂಬಿಸಿದೆ ಎಂದು ಆರೋಪಿಸಲಾಗಿದೆ.
ಸಂಪೂರ್ಣ ವಿಫಲ: ದೇಶದಲ್ಲೆ ಕೊರೋನ ಸೋಂಕಿಗೆ ಮೊದಲು ಬಲಿ ಆಗಿದ್ದು ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ. ಆದರೂ ಎಚ್ಚೆತ್ತು ಕೊಳ್ಳದ ರಾಜ್ಯ ಸರಕಾರ, ಕೇಂದ್ರದ ಆದೇಶಕ್ಕೆ ಕಾದು ರಾಜ್ಯವನ್ನು ನರಕ ಮಾಡಿದ್ದು ಇತಿಹಾಸ. ಲಾಕ್ಡೌನ್ ಹಾಗೂ ನಂತರ ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಸಾಕಷ್ಟು ಅವಕಾಶವಿದ್ದರೂ ಸೋಮಾರಿತನ ತೋರಿಸಿ, ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದು ಸೋಂಕಿತರು ಬೀದಿಯಲ್ಲಿ ಸಾಯುವಂತೆ ಮಾಡಿದ್ದು, ಹಾಸಿಗೆ ಇಲ್ಲದೆ ಜನ ಸಾಯುತ್ತಿದ್ದರೂ ಕೇವಲ 10ಸಾವಿರ ಹಾಸಿಗೆ ವ್ಯವಸ್ಥೆ ಮಾಡದ ಅತ್ಯಂತ ಹೀನ ಸರಕಾರ.
ಅಲ್ಲದೆ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ.ಗಳ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿರುವುದು ಒಂದು ವರ್ಷದ ಸಾಧನೆ ಎಂದು ಆಪ್ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದ್ದಾರೆ.