ಬಾಲಕಿಯ ಅತ್ಯಾಚಾರ, ವ್ಯಕ್ತಿಯ ಕೊಲೆ ಆರೋಪಿ ಬಂಧನ: 5 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2020-07-26 16:51 GMT

ಮಂಡ್ಯ, ಜು.26: ಅಪ್ರಾಪ್ತ ಬಾಲಕಿಯ ಅತ್ಯಾಚಾರ, ವ್ಯಕ್ತಿಯ ಕೊಲೆ ಹಾಗೂ ಹಲವು ಕಳವು ಪ್ರಕರಣಗಳ ಆರೋಪಿಯನ್ನು ನಾಗಮಂಗಲ ತಾಲೂಕು ಬೆಳ್ಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ಪಟ್ಟಣದ ಆಂಜನೇಯ ಬ್ಲಾಕ್ ನಿವಾಸಿ ಅಣ್ಣೇಗೌಡರ ಪುತ್ರ ಅಶೋಕ ಅಲಿಯಾಸ್ ಪ್ರಕಾಶ, ಸುಬ್ರಮಣಿ(49) ಬಂಧಿತ ಆರೋಪಿ. ಈತನಿಂದ 5 ಲಕ್ಷ ರೂ. ಮೌಲ್ಯದ 62 ಗ್ರಾಂ ಚಿನ್ನದ ಒಡವೆಗಳು, ಹೊಂಡಾ ಆಕ್ಟೀವಾ, ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  

ಆರೋಪಿಯು ಜು.3 ರಂದು ನಾಗಮಂಗಲ ತಾಲೂಕು ಬೆಳ್ಳೂರು ಠಾಣೆಯ ಗ್ರಾಮವೊಂದರಲ್ಲಿ ಅಜ್ಜಿಯ ಪಕ್ಕ ಮಲಗಿದ್ದ 10 ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಗ್ರಾಮದ ಆರೋಗ್ಯ ಕೇಂದ್ರದ ಬಳಿ ಅತ್ಯಾಚಾರ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಪರಶುರಾಂ ತಿಳಿಸಿದ್ದಾರೆ.

ಇದಲ್ಲದೆ ಕಳೆದ ಮೇ ತಿಂಗಳಲ್ಲಿ ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಮೇಲಿನಿಂದ ಕುಮಾರ್ ಎಂಬಾತನನ್ನು ಗೆಳೆಯರ ಜತೆಗೂಡಿ ಕೆಳಕ್ಕೆಸೆದು ಕೊಲೆ ಮಾಡಿ ಶವಕ್ಕೆ ಬಟ್ಟೆ ಸುತ್ತಿ ಚರಂಡಿಗೆ ಎಸೆದಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರೋಪಿಯು ನಾಗಮಂಗಲ ಟೌನ್ ನಲ್ಲಿ 62 ಗ್ರಾಂ ಚಿನ್ನದ ಒಡವೆಗಳು, ಶಿರಾ, ಅರಕಲಗೂಡು, ಬೀರೂರು, ಯಡಿಯೂರುಗಳಲ್ಲಿ ಬೈಕ್ ಹಾಗೂ ಸ್ಕೂಟರ್ ಕಳವು ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ನಾಗಮಂಗಲ ಡಿವೈಎಸ್ಪಿ ಕೆ.ಬಿ.ವಿಶ್ವನಾಥ್ ಮಾರ್ಗದರ್ಶನ ಸಿಪಿಐ ರಾಜೇಂದ್ರ ನೇತೃತ್ವದಲ್ಲಿ ತಂಡ ಆರೋಪಿಯನ್ನು ಬಂಧಿಸಿದ್ದು, ತಂಡದ ಕಾರ್ಯವನ್ನು ಎಸ್ಪಿ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News