ಮುಳ್ಳಯ್ಯನಗಿರಿಯ 20,667 ಎಕರೆ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸರ್ವೇ: ಸಿಪಿಐ ಆರೋಪ

Update: 2020-07-28 13:07 GMT

ಚಿಕ್ಕಮಗಳೂರು, ಜು.28: ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಜಿಲ್ಲೆಯಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಜನರ ಬದುಕನ್ನು ಅತಂತ್ರಗೊಳಿಸುವ ಹುನ್ನಾರ ನಡೆಯುತ್ತಿದ್ದು, ಜಿಲ್ಲೆಯ ಮುಳ್ಳಯ್ಯನಗಿರಿ ವ್ಯಾಪ್ತಿಯ 20,667 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಸಂರಕ್ಷಣಾ ಪ್ರದೇಶ ಯೋಜನೆಗಾಗಿ ಸರ್ವೇ ಕಾರ್ಯ ನಡೆಸಲಾಗಿದೆ. ಈ ಯೋಜನೆಯಿಂದಾಗಿ ಈ ಪ್ರದೇಶದಲ್ಲಿ ಜನರ ಬದುಕು ನಾಶವಾಗಲಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಆರೋಪಿಸಿದ್ದು, ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಚಿಕ್ಕಮಗಳೂರು, ತರೀಕೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಹಂತ ಹಂತವಾಗಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಈ ತಾಲೂಕು ವ್ಯಾಪ್ತಿಯಲ್ಲಿನ ಕೃಷಿ ಅವಲಂಭಿತ ರೈತರಿಗೆ, ನಿವೇಶನ ನಿರೀಕ್ಷೆಯಲ್ಲಿರುವ ಬಡವರ್ಗದ ಜನರಿಗೆ ಕಂದಾಯ ಭೂಮಿ ಲಭ್ಯವಾಗದಂತಾಗುತ್ತದೆ ಎಂದು ಅವರು ತಿಳಿಸಿದರು.

ಚಿಕ್ಕಮಗಳೂರು ತಾಲೂಕಿನಲ್ಲಿರುವ 79,143 ರೈತರಲ್ಲಿ ಫಾರಂ.ನಂ. 57, 53ರ ಯೋಜನೆಯಡಿಯಲ್ಲಿ 9,615 ರೈತರು ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದಾರೆ. ಅದೇ ರೀತಿ ಜಿಲ್ಲಾದ್ಯಂತ 8,428 ಮಂದಿ 94ಸಿ ಯೋಜನೆಯಡಿಯಲ್ಲಿ ಮನೆ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಸುಮಾರು 59,367 ಮಂದಿ ನಿವೇಶನ ರಹಿತರು ಗ್ರಾಮ ಪಂಚಾಯತ್‍ಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ತನ್ನ ವಶದಲ್ಲಿರುವ ಪೂರ್ಣ ಕಂದಾಯ, ಗೋಮಾಳ, ಹುಲುಬನಿ ಸೇರಿದಂತೆ ಇತರ ಭೂಮಿಯನ್ನು ವಿವಿಧ ಯೋಜನೆ ಹೆಸರಿನಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕುದುರೆಮುಖ ಕಂದಾಯ ಇಲಾಖೆ ವಶದಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಉತ್ತರ ಕನ್ನಡ ಜಿಲ್ಲೆಯ ರೈಲ್ವೇ ಯೋಜನೆಗೆ ಪಡೆದುಕೊಂಡಿರುವ ಅರಣ್ಯ ಭೂಮಿಗೆ ಬದಲಿ ಭೂಮಿಯಾಗಿ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯಕ್ಕೆ ಪಡೆದುಕೊಂಡಿರುವ ಭೂಮಿಗೆ ಬದಲಿ ಭೂಮಿಯನ್ನು ಜಿಲ್ಲೆಯ ಕೊಳಗಾಮೆಯಲ್ಲಿರುವ ಕಂದಾಯ ಭೂಮಿಯನ್ನು ನೀಡಲಾಗಿದೆ. ಪ್ರತಿಯೊಂದು ಯೋಜನೆಗೆ ಜಿಲ್ಲೆಯ ಕಂದಾಯ ಭೂಮಿಯನ್ನು ನೀಡಿದಲ್ಲಿ ನಿವೇಶನ ರಹಿತರಿಗೆ, ಫಾರಂ.ನಂ 53, 57, ಹಾಗೂ 94ಸಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ವಿವಿಧ ಯೋಜನೆಯಡಿಯಲ್ಲಿ ಜಿಲ್ಲೆಯ ಕಂದಾಯ ಭೂಮಿ ಹಸ್ತಾಂತರವನ್ನು ಕೈಬಿಡಬೇಕು. ಇಲ್ಲದಿದ್ದರೆ ಭಾರತ ಕಮ್ಯೂನಿಸ್ಟ್ ಪಕ್ಷ ಸೇರಿದಂತೆ ಜಿಲ್ಲೆಯಲ್ಲಿರುವ ವಿವಿಧ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಒಗ್ಗೂಡಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ನಿವೇಶನ ರಹಿತರಿಗೆ, ಫಾರಂ.ನಂ 53, 57, ಹಾಗೂ 94ಸಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ನೀಡಿದ ಮೇಲೆ ಕಂದಾಯಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೇ ನಮ್ಮದೇನು ಅಭ್ಯಂತರವಿಲ್ಲ, ಆದರೆ ಜಿಲ್ಲೆಯಲ್ಲೇ ಕಂದಾಯ ಭೂಮಿಗೆ ಬೇಡಿಕೆ ಇರುವಾಗ ಜಿಲ್ಲೆಯಲ್ಲಿನ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸುತ್ತಿರುವುದು ಒಂದೆಡೆಯಾದರೇ ಮತ್ತೊಂದೆಡೆ ಬೇರೆ ಜಿಲ್ಲೆಗಳ ಯೋಜನೆಗೆ ಜಿಲ್ಲೆಯಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ. ಸರಕಾರದ ಈ ಜನವಿರೋಧಿ ನೀತಿಗಳ ವಿರುದ್ಧ ಎತ್ತಬೇಕಾದ ಜನಪ್ರತಿನಿಧಿಗಳು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು. 

ಭಾರತ ಕಮ್ಯೂನಿಸ್ಟ್ ಪಕ್ಷದ ವಿಜಯಕುಮಾರ್ ಮಾತನಾಡಿ, ತಾಲೂಕು ವ್ಯಾಪ್ತಿಯ ಮುಳ್ಳಯ್ಯನಗಿರಿ ಸಂರಕ್ಷಣಾ ಪ್ರದೇಶದ ಹೆಸರಿನಲ್ಲಿ 20,667 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಅರಣ್ಯಾಧಿಕಾರಿಗಳು ಕೇವಲ 2 ತಿಂಗಳ ಕಾಲಾವಧಿಯಲ್ಲಿ ತರಾತುರಿಯಲ್ಲಿ ಬೇಕಾಬಿಟ್ಟಿ ಸರ್ವೇ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಇಲ್ಲಿ ವಾಸ ಮಾಡುವ ಜನ ಸಂಖ್ಯೆ, ಕೃಷಿ ಭೂಮಿ ಮತ್ತಿತರ ವರದಿಗಳನ್ನು ಸಮರ್ಪಕವಾಗಿ ಸಂಗ್ರಹಿಸಿಲ್ಲ ಗಿರಿ ತಪ್ಪಲಿನ ಕಂದಾಯ ಭೂಮಿಯಲ್ಲದೇ ಇಲ್ಲಿನ ಜನರ ಕೃಷಿ ಜಮೀನುಗಳನ್ನೂ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದಲ್ಲಿ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು. 

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೀವೇಶನ ರಹಿತರು, ಬಗರ್ ಹುಕುಂ, ಅಕ್ರಮ ಸಕ್ರಮ, 94ಸಿ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿಸರಕಾರಿ ಉದ್ದೇಶಗಳಿಗಾಗಿ ಅಗತ್ಯ ಇರುವ ಕಂದಾಯ ಜಮೀನುಗಳನ್ನು ಕಾಯ್ದಿರಿಸಬೇಕು. ಗ್ರಾಮಗಳ ಅಭಿವೃದ್ಧಿಗೆ ಪಂಚಾಯತ್ ವ್ಯಾಪ್ತಿಯ ಭೂಮಿಯನ್ನು ಮೀಸಲಿಡಬೇಕು. ಗ್ರಾಮ, ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಸ್ಥಳ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಹ ಕಾರ್ಯದರ್ಶಿ ಜಿ.ರಘು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಹುಲಿ ಯೋಜನೆಗಾಗಿ ಬಫರ್ ಝೋನ್ ಗುರುತಿಸಲು ಸರಕಾರದ ಗೆಜೆಟ್‍ನಲ್ಲಿ ಆದೇಶ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಫರ್ ಝೋನ್ ಜಾರಿಯಾಗಲಿದೆ. ಈ ಯೋಜನೆ ಜಿಲ್ಲೆಯಲ್ಲಿ ಜಾರಿಯಾದರೆ ಕೊಪ್ಪ ಪಟ್ಟಣ ಬಫರ್ ಝೋನ್ ವ್ಯಾಪ್ತಿಗೆ ಒಳಪಡಲಿದೆ. ಜಿಲ್ಲೆಯ ಬಾಸಾಪುರ, ಅತ್ತಿಗುಂಡಿ, ಕೊಳಮಗ್ಗೆ, ಲಕ್ಕವಳ್ಳಿ ಮತ್ತಿತರ ಗ್ರಾಮಗಳ ಬಫರ್ ಝೋನ್ ವ್ಯಾಪ್ತಿಗೊಳಪಡಲಿವೆ. ಅಲ್ಲಿನ ಜನರು ಒಕ್ಕಲೇಳುವುದು ಅನಿವಾರ್ಯವಾಗಲಿದೆ. ಸರಕಾರ ಈ ಯೋಜನೆಯನ್ನು ಕೈಬಿಡದಿದ್ದಲ್ಲಿ ಹೋರಾಟ ರೂಪಿಸಲಾಗುವುದು.
- ವಿಜಯ್‍ ಕುಮಾರ್

ಜಿಲ್ಲೆಯ ಕುದುರೆಮುಖದಲ್ಲಿ ಕಂದಾಯ ಇಲಾಖೆಗೆ ಸೇರಿರುವ ಸಾವಿರಾರು ಎಕರೆ ಜಮೀನನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗೆ ಸೇರುವ ಅರಣ್ಯ ಭೂಮಿಗೆ ಬದಲಾಗಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿವಿ ಕಟ್ಟಡಗಳಿಗೆ ಅಲ್ಲಿನ ಅರಣ್ಯ ಭೂಮಿ ನೀಡಲಾಗುತ್ತಿದ್ದು, ಅಲ್ಲಿನ ಅರಣ್ಯ ಭೂಮಿಗೆ ಬದಲಿಯಾಗಿ ಜಿಲ್ಲೆಯ ಕೊಳಮಾಗೆ ಗ್ರಾಮದಲ್ಲಿ 111.5 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕಂದಾಯ ಭೂಮಿಗೆ ಬೇಡಿಕೆ ಹೆಚ್ಚಿದ್ದರೂ ಬೇರೆ ಜಿಲ್ಲೆಯಲ್ಲಿನ ಯೋಜನೆಗಳಿಗೆ ಜಿಲ್ಲೆಯಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತದೇ ಮೌನವಹಿಸಿದ್ದಾರೆ.
- ಎಚ್.ಎಂ.ರೇಣುಕಾರಾಧ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News