ಪಾಕಿಸ್ತಾನ ಝಿಂದಾಬಾದ್ ಘೋಷಣೆ ಆರೋಪ: ಆರೋಪಿಗಳಿಗೆ ಕಾಶ್ಮೀರಕ್ಕೆ ತೆರಳಲು ಹೈಕೋರ್ಟ್ ನಿರಾಕರಣೆ
ಹುಬ್ಬಳ್ಳಿ, ಜು.27: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ್ದ ಆರೋಪ ಹೊತ್ತಿರುವ ಕಾಶ್ಮೀರಿ ಮೂಲದ ಮೂವರು ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಲು ಸಲ್ಲಿಸಿದ್ದ ಅರ್ಜಿಯನ್ನು ಹುಬ್ಬಳ್ಳಿ ನಗರದ ಎರಡನೆ ಜೆಎಂಎಫ್ಸಿ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಫೆ.15ರಂದು ಕೆಎಲ್ಇ ಕಾಲೇಜಿನಲ್ಲಿ ಕಾಶ್ಮೀರಿ ಮೂಲದ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದರು ಎನ್ನಲಾಗಿದ್ದು, ಈ ವಿದ್ಯಾರ್ಥಿಗಳ ಜಾಮೀನಿಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ತಂಡ ವಕಾಲತ್ತು ವಹಿಸಿತ್ತು.
ಈ ವೇಳೆ ಷರತ್ತು ಬದ್ಧ ಜಾಮೀನು ನೀಡಿದ್ದ ನ್ಯಾಯಾಲಯ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಇರಲು ಅವಕಾಶ ಕಲ್ಪಿಸಲಾಗಿತ್ತು. ಈಗ ಬೆಂಗಳೂರಿನಿಂದ ತವರು ಕಾಶ್ಮೀರಕ್ಕೆ ಹೋಗಲು ಅನುಮತಿ ಕೋರಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ನ್ಯಾಯಾಧೀಶ ವಿಶ್ವನಾಥ ಮುಗೂತಿ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಈ ಹಿಂದೆ ಮಾ.5ರಂದು ಕಾಶ್ಮೀರದ ಮೂವರು ವಿದ್ಯಾರ್ಥಿಗಳಿಂದ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ವಕೀಲರು ಆರೋಪಿಗಳ ಪರ ವಾದ ಮಂಡನೆ ಮಾಡಿದ್ದರು.