ವಿದ್ಯುತ್ ಮಗ್ಗ ನೇಕಾರರಿಗೂ ಸಮ್ಮಾನ ಯೋಜನೆ ವಿಸ್ತರಣೆ: ಸಚಿವ ಶ್ರೀಮಂತ ಪಾಟೀಲ
Update: 2020-07-29 12:07 GMT
ಬಾಗಲಕೋಟೆ, ಜು.29: ನೇಕಾರ ಸಮ್ಮಾನ ಯೋಜನೆಯನ್ನು ವಿದ್ಯುತ್ ಮಗ್ಗ(ಪವರ್ಲೂಮ್) ನೇಕಾರರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.25ಕ್ಕೂ ಹೆಚ್ಚು ವಿದ್ಯುತ್ ಮಗ್ಗದ ನೇಕಾರರಿದ್ದಾರೆ. ಅವರೆಲ್ಲರಿಗೂ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ನೀಡಲಾಗುವುದು. ಈಗಾಗಲೇ 33 ಸಾವಿರ ಕೈ ಮಗ್ಗ ನೇಕಾರರಿಗೆ ತಲಾ ಎರಡು ಸಾವಿರ ರೂ.ನಂತೆ 6.61 ಕೋಟಿ ರೂ.ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ಕೋವಿಡ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಕೈಮಗ್ಗ ನೇಕಾರರು ನೇಯ್ದ ಸೀರೆಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಈ ಸಂಬಂಧ 6 ಲಕ್ಷ ಸೀರೆ ಖರೀದಿಗೆ ಮಂಜೂರಾತಿ ನೀಡಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ನೇಕಾರರಿಗೆ ಸಹಾಯವಾಗಲಿದೆ ಎಂದು ಅವರು ಹೇಳಿದರು.