ನನ್ನ ಅಸ್ತಿತ್ವ ಇಲ್ಲವಾಗಿಸಲು ಸ್ಥಳೀಯವಾಗಿ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ: ಕುಮಾರಸ್ವಾಮಿ

Update: 2020-07-30 18:15 GMT

ಬೆಂಗಳೂರು, ಜು. 30: ರಾಮನಗರದಲ್ಲಿ ಸ್ಥಳೀಯವಾಗಿ ನನ್ನ ಅಸ್ತಿತ್ವ ಇಲ್ಲವಾಗಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿದ್ದಾರೆ. ಆದರೆ, ರಾಮನಗರದ ಜನತೆಗೆ ನಾನು ಏನು ಎಂದು ಗೊತ್ತಿದೆ. ನಾನು ರಾಮನಗರದ ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂಬುದು ಸುಳ್ಳು. ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇನೆ. ಇದರಲ್ಲಿ ಬೆಂಬಲ ನೀಡುವ ಪ್ರಶ್ನೆ ಎಲ್ಲಿಯದು ಎಂದು ತಿರುಗೇಟು ನೀಡಿದರು.

ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ನಾನು ಗಂಭೀರವಾಗಿ ಪರಿಗಣಿಸಲ್ಲ. ಅವರು ನನ್ನ ಸರಕಾರವನ್ನು ಉರುಳಿಸಲು ಎಷ್ಟೆಲ್ಲ ಕೆಲಸ ಮಾಡಿದ್ದಾರೆ? ಏನೇಲ್ಲಾ ಶ್ರಮವಹಿಸಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಸರಕಾರ ಬೀಳಿಸಿದ ಪರಿಣಾಮ ಅವರಿಗೆ ಎಂಎಲ್‍ಸಿ ಮಾಡಲಾಗಿದೆ. ಮುಂದೆ ಅವರು ಸಚಿವರು ಆಗಬಹುದು, ಅದು ನನಗೆ ಸಂಬಂಧಿಸಿದಲ್ಲ ಎಂದರು.

ಮೇಲ್ಮನೆ ಸದಸ್ಯರಾದ ಕೂಡಲೇ ಯೋಗೇಶ್ವರ್ ಅವರು ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ತಗ್ಗಿ-ಬಗ್ಗಿ ನಡೆಯಬೇಕು. ನಾನು ಯಾವುದೇ ಕಾರಣಕ್ಕೂ ಸರಕಾರಕ್ಕೆ ಬೆಂಬಲ ನೀಡಲು ಹೋಗುವುದಿಲ್ಲ. ನನ್ನ ಅವಧಿಯಲ್ಲಿ ಸರಕಾರ ಅಸ್ಥಿರಗೊಳಿಸಲಾಗುತ್ತಿದೆ ಎಂಬ ಪ್ರಚಾರದಿಂದ ಸರಕಾರದ ಆಡಳಿತದ ಮೇಲೆ ದುಷ್ಪರಿಣಾಮವಾಯಿತು. ಇದೀಗ ಬಿಎಸ್‍ವೈ ಅವಧಿಯಲ್ಲಿಯೂ ಅದೇ ಆಗುತ್ತಿದೆ ಎಂದು ಹೇಳಿದರು.

ಜೆಡಿಎಸ್ ಪಕ್ಷವನ್ನು ಬಿಜೆಪಿ `ಬಿ' ಟೀಮ್ ಎಂದು ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಯಿತು. ಕೊರೋನ ಸಂಕಷ್ಟದಲ್ಲಿ ಸಮಯದಲ್ಲಿ ಜನರಿಗೆ ನೋವಿಗೆ ಸ್ಪಂದಿಸುವ ರೀತಿಯಲ್ಲಿ ಸರಕಾರಕ್ಕೆ ಸಲಹೆ ನೀಡಬೇಕೇ ಹೊರತು ಹೋರಾಟ ಮಾಡುವ ಸಮಯ ಇದಲ್ಲ. ಇದರಿಂದ ಜನರಿಗೆ ಪ್ರಯೋಜನ ಆಗುವುದಿಲ್ಲ.

ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರು ತಿಂಗಳ ಪೂರೈಸಿದ ಬಿಎಸ್‍ವೈ ಸರಕಾರ, ಇದೀಗ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಸರಕಾರದ ಏನು ಸಾಧನೆ ಮಾಡಿದೆ ಎಂಬುದು 2021ಕ್ಕೆ ಗೊತ್ತಾಗಲಿದೆ. ಇಲಾಖೆಗಳ ಸಚಿವರ ನಡುವೆಯೇ ಹೊಂದಾಣಿಕೆ ಇಲ್ಲದ ಕಾರಣ ಕೊರೋನ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News