ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ಮಹಿಳೆ: 50 ಸಾವಿರ ರೂ. ನೆರವು ನೀಡಿದ ಝಮೀರ್ ಅಹ್ಮದ್
ಬೆಂಗಳೂರು, ಆ.1: ತನ್ನ ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮಹಿಳೆಯೊಬ್ಬರು ತಾಳಿಯನ್ನೆ ಅಡವಿಟ್ಟ ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದ ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರ ಹಾಲಿ ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅವರು, ಸಂಕಷ್ಟದಲ್ಲಿದ್ದ ಮಹಿಳೆಗೆ ತಮ್ಮ ಸ್ನೇಹಿತರ ಮೂಲಕ 50 ಸಾವಿರ ರೂ. ನೆರವು ನೀಡಿ ಮಾನವೀಯತೆ ಮರೆದಿದ್ದಾರೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರ ನಾಗನೂರ ಗ್ರಾಮ ಕಸ್ತೂರಿ ಎಂಬವರು ತಮ್ಮ ಇಬ್ಬರು ಮಕ್ಕಳ ವ್ಯಾಸಂಗಕ್ಕಾಗಿ ತಾಳಿಯನ್ನೇ ಗಿರವಿ ಇಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ಸದ್ದಿಯನ್ನು ಗಮನಿಸಿದ ಝಮೀರ್ ಅಹ್ಮದ್ ಖಾನ್ ಅವರು, ನನ್ನ ಸ್ನೇಹಿತರ ಮೂಲಕ ಆ ಮಹಿಳೆಗೆ 50 ಸಾವಿರ ರೂ. ಹಣವನ್ನು ತಲುಪಿಸಿದ್ದಾರೆ.
'ತನ್ನ ಮಕ್ಕಳ ವ್ಯಾಸಂಗಕ್ಕಾಗಿ ತಾಳಿಯನ್ನೆ ಅಡವಿಟ್ಟ ಸುದ್ದಿ ಕೇಳಿ ಬಹಳ ದುಃಖವಾಯಿತು. ಹೀಗಾಗಿ ಕೂಡಲೇ ಅವರಿಗೆ 50 ಸಾವಿರ ರೂ.ತಲುಪಿಸಿದ್ದೇನೆ. ಇಂದು ನನ್ನ ಹುಟ್ಟುಹಬ್ಬ. ಆ ನಿಮಿತ್ತ ಅಭಿಮಾನಿಗಳು ಹಾಗೂ ನನ್ನ ಬೆಂಬಲಿಗರು ಯಾರೊಬ್ಬರೂ ಶುಭ ಕೋರಲು ನನ್ನ ಮನೆಗೆ ಬರುವುದು ಬೇಡ. ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗಲಿ ಎಂದು ಮನವಿ ಮಾಡಿದ್ದೇನೆ' ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.