ಡಿಕೆಶಿ, ಹೆಚ್ಡಿಕೆ ವಿರುದ್ಧ ಅನಗತ್ಯ ಹೇಳಿಕೆ ನೀಡಬೇಡಿ: ಸಿ.ಪಿ.ಯೋಗೇಶ್ವರ್ ಗೆ ಬಿಎಸ್ವೈ ಸೂಚನೆ
Update: 2020-08-01 15:56 GMT
ಬೆಂಗಳೂರು, ಆ. 1: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಯಾವುದೇ ಕಾರಣಕ್ಕೂ ಅನಗತ್ಯ ಹೇಳಿಕೆ ನೀಡಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
`ಡಿ.ಕೆ.ಶಿವಕಮಾರ್ ಮತ್ತು ಕುಮಾರಸ್ವಾಮಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲದೆ, ಅವರು ಬಿಎಸ್ವೈ ಅವರನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದಾರೆ' ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಸೃಷ್ಟಿಸಬೇಡಿ. ನಿಮ್ಮ ರಾಜಕಾರಣ ಏನೇ ಇದ್ದರೂ ಅದು ಚನ್ನಪಟ್ಟಣ ಕ್ಷೇತ್ರಕ್ಕೆ ಸೀಮಿತವಾಗಿರಲಿ. ಅದನ್ನು ಬಿಟ್ಟು ನಮ್ಮ ಹಂತದವರೆಗೂ ತರಬೇಡಿ ಎಂದು ಯಡಿಯೂರಪ್ಪ ಅವರು ಯೋಗೇಶ್ವರ್ ಗೆ ಹೇಳಿದ್ದಾರೆಂದು ಗೊತ್ತಾಗಿದೆ.