ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಯುವಕ
Update: 2020-08-01 17:27 GMT
ಮಂಡ್ಯ, ಆ.1: ಕೊರೋನ ಸೋಂಕು ಹರಡುತ್ತದೆ ಮನೆಯಿಂದ ಹೊರ ಹೋಗಬೇಡ, ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಹೇಳಿದ ಹೆತ್ತ ತಾಯಿಯನ್ನೇ ಮಗ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ರಸ್ತೆಯಲ್ಲಿ ಶನಿವಾರ ನಡೆದಿದೆ.
ಶ್ರೀಲಕ್ಷ್ಮಿ (48) ಹತ್ಯೆಗೊಳಗಾದ ತಾಯಿ. ಪುತ್ರ ಮನು ಶರ್ಮಾ ಕೊಲೆ ಮಾಡಿದ ಆರೋಪಿ. ಈತ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಕೊರೋನ ಸಮಯದಲ್ಲಿ ಬೈಕ್ ತೆಗೆದುಕೊಂಡು ಸುತ್ತಾಡಬೇಡ. ಅತಿಯಾಗಿ ಮೊಬೈಲ್ ಬಳಕೆ ಮಾಡಬೇಡ. ಇದರಿಂದ ನಿನಗೆ ತೊಂದರೆ ಆಗಲಿದೆ ಎಂದು ಮಗನಿಗೆ ಬುದ್ದಿವಾದ ಹೇಳಿದ್ದೇ ತಾಯಿ ಕೊಲೆಗೆ ಕಾರಣ ಎನ್ನಲಾಗಿದೆ.
ಈ ಸಂಬಂಧ ದೂರು ಸ್ವೀಕರಿಸಿರುವ ಪಶ್ಚಿಮ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.