ಜಿಲ್ಲಾಡಳಿತದಿಂದ ಬೆಡ್ ತಿರಸ್ಕಾರ ಆರೋಪ: ರಸ್ತೆಯಲ್ಲಿ ಬೆಡ್ ಮೇಲೆ ಮಲಗಿ ಕಾಂಗ್ರೆಸ್ ಪ್ರತಿಭಟನೆ

Update: 2020-08-03 17:43 GMT

ಕಲಬುರಗಿ, ಜು.3: ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಲಾಗಿದ್ದ 450 ಬೆಡ್‌ಗಳನ್ನು ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳ ಒತ್ತಡ ಹಾಗೂ ಕೆಟ್ಟ ರಾಜಕೀಯದಿಂದಾಗಿ ಬೆಡ್‌ಗಳನ್ನು ಈವರಗೂ ಸ್ವೀಕರಿಸಿಲ್ಲ ಎಂದು ಅರೋಪಿಸಿ ನಗರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಜಿಲ್ಲಾಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್‌ಗಳ ಅಭಾವದಿಂದಾಗಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, 450 ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಲಾಗಿತ್ತು. ಆದರೆ, ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳ ಒತ್ತಡ ಹಾಗೂ ಕೆಟ್ಟ ರಾಜಕೀಯದಿಂದಾಗಿ ಈ ಬೆಡ್‌ಗಳನ್ನು ಈವೆರಗೂ ಸ್ವೀಕರಿಸಿಲ್ಲ ಎಂದು ಕಾಂಗ್ರೆಸ್ ಅರೋಪಿಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಬಹುಶಃ ಕಾಂಗ್ರೆಸ್‌ನವರು ನೀಡಿದ ಬೆಡ್‌ಗಳೆಂದು ಇವುಗಳನ್ನು ಬಳಸಿಕೊಳ್ಳುತ್ತಿಲ್ಲದ ಕಾರಣ, ಈಗ ಆ ಬೆಡ್‌ಗಳ ಮೇಲೆ ಮೋದಿ ಮತ್ತು ಯಡಿಯೂರಪ್ಪನವರ ಚಿತ್ರಗಳನ್ನು ಮುದ್ರಿಸಿ ನೀಡಲಾಗಿದೆ. ಇನ್ನಾದರೂ ಈ ಬೆಡ್‌ಗಳನ್ನು ಬಳಸಿಕೊಂಡು‌ ಜಿಲ್ಲಾಡಳಿತವು ಸೋಂಕಿತರ ಆರೈಕೆ ಮಾಡಬೇಕೆಂದು ಒತ್ತಾಯಿಸಿದರು.

ಕೆಪಿಸಿಸಿ ವತಿಯಿಂದ 550 ಬೆಡ್‌ಗಳನ್ನು ಖರೀದಿಸಿ, ಕಲಬುರಗಿಗೆ ತರಲಾಗಿತ್ತು. ಇವುಗಳಲ್ಲಿ 100 ಬೆಡ್‌ಗಳನ್ನು ಬಳಸಿಕೊಂಡು ಚಿತ್ತಾಪುರದ ನಾಗಾವಿ ಬಳಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿ, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಜಿಲ್ಲಾಸ್ಪತ್ರೆಗಳ ಮೇಲಿನ ಒತ್ತಡ ತಕ್ಕಮಟ್ಟಿಗೆ ಕಡಿಮೆಯಾಗಿದೆ ಎಂದರು‌.

ಕೊರೋನ ನಿಯಂತ್ರಿಸಲು ಕಾಂಗ್ರೆಸ್ ಪಕ್ಷವು ಸಹಕಾರ ನೀಡುತ್ತಿಲ್ಲವೆಂದು ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆದರೆ, ನಾವೇ ದುಡ್ಡು ಕೊಟ್ಟು ಬೆಡ್‌ಗಳನ್ನು ಖರೀದಿಸಿ ಕೊಟ್ಟರೂ, ಅವುಗಳನ್ನು ಬಳಸಿಕೊಂಡು ಸೋಂಕಿತರಿಗೆ ಚಿಕಿತ್ಸೆ‌ ನೀಡುವ‌ ಬದಲು ಕೆಟ್ಟ ರಾಜಕೀಯದಲ್ಲಿ ಬಿಜೆಪಿ ತೊಡಗಿಕೊಂಡಿದೆ. ಜನರು ಬೆಡ್‌ಗಳಿಲ್ಲದೇ ಪರದಾಡುತ್ತಿರುವುದು‌ ದಿನನಿತ್ಯವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಬೆಡ್‌ಗಾಗಿ ಕಲಬುರಗಿಯ ಎಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿ, ಕೊನೆಗೂ ಬೆಡ್ ದೊರಕದೇ ಆಟೋದಲ್ಲೇ ಅಸುನೀಗಿದ್ದಾರೆ. ಇಷ್ಟಾದರೂ ಬಿಜೆಪಿ ಸರ್ಕಾರದ ಮನಕಲುಕಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕೂಡಲೇ ಉಸ್ತುವಾರಿ ಸಚಿವರು ನಾವು ನೀಡಿರುವ ಬೆಡ್‌ಗಳನ್ನು ಸ್ವೀಕರಿಸಲು ದೊಡ್ಡ ಮನಸ್ಸು‌ ಮಾಡಬೇಕು. ಪ್ರಿಯಾಂಕ್ ಅಥವಾ ಕಾಂಗ್ರೆಸ್ ಪಕ್ಷಕ್ಕಾಗಿ ಅಲ್ಲ, ಜನರಿಗಾಗಿ ದೊಡ್ಡ ಮನಸ್ಸು ಮಾಡಿ ಈ ಬೆಡ್‌ಗಳನ್ನು ಬಳಸಿಕೊಂಡು‌ ಕಲಬುರಗಿ ಜಿಲ್ಲೆಯಲ್ಲಿ "ಚಿತ್ತಾಪುರ ಮಾದರಿ"ಯ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ, ಜನರಿಗೆ‌ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಇಂದಿನ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News