ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಆಲದ ಮರ: ಇಬ್ಬರಿಗೆ ಗಾಯ

Update: 2020-08-04 05:27 GMT

ಹನೂರು, ಆ.4: ರಸ್ತೆ ಬದಿಯಲ್ಲಿದ್ದ ಬೃಹತ್ ಆಲದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿಬಿದ್ದ ಪರಿಣಾಮ ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾದರೂ, ಗಂಭೀರ ಗಾಯಗೊಂಡ ಘಟನೆ ಹನೂರು ಪಟ್ಟಣದ ಹೊರ ವಲಯದ ಮಲೆಮಹದೇಶ್ವರ ಕ್ರೀಡಾಂಗಣದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

 ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕೀರೆಪಾತಿ ಗ್ರಾಮದ ಜೋಸೆಫ್ ಮತ್ತು ಕುಮಾರ್ ಗಾಯಗೊಂಡವರಾಗಿದ್ದಾರೆ. ಇಂದು ಬೆಳಗ್ಗೆ 6:30ರ ಸುಮಾರಿಗೆ ಇವರಿಬ್ಬರು ಮಾರ್ಟಳ್ಳಿ ಗ್ರಾಮದಿಂದ ಹನೂರಿಗೆ ಬೈಕಿನಲ್ಲಿ ಹೊರಟಿದ್ದರು. ಇವರು ಸಂಚರಿಸುತ್ತಿದ್ದ ಬೈಕ್ ಅಜ್ಜೀಪುರ ರಸ್ತೆಯ ಕ್ರೀಡಾಂಗಣದ ಬಳಿಯ ರಾಮಯ್ಯನ ಕೆರೆ ಹತ್ತಿರ ತಲುಪಿದಾಗ ರಸ್ತೆ ಬದಿಯಲ್ಲಿದ್ದ ಪುರಾತನ ಕಾಲದ ಆಲದ ಮರ ಇದ್ದಕ್ಕಿದ್ದಂತೆ ಉರುಳಿ ಇವರ ಮೇಲೆ ಬಿದ್ದಿದೆ. ಇದರಿಂದ ಜೋಸೆಫ್ ಗಂಭೀರ ಗಾಯಗೊಂಡಿದ್ದರೆ, ಕುಮಾರ್ ಕಾಲಿಗೆ ಗಾಯಗಳಾಗಿವೆ.

ಈ ವೇಳೆ ಅದೆ ರಸ್ತೆಯಲ್ಲಿ ವಾಯು ವಿಹಾರ ನಿರತರಾಗಿದ್ದ ಜೆಡಿಎಸ್ ಮುಖಂಡ ಮಂಜೇಶ್ ಮತ್ತು ಸತ್ತೀಶ್ ಎಂಬುವವರು ಮರದಡಿಗೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News