ಸಂಸದೆ ಶೋಭಾ ಕರಂದ್ಲಾಜೆ 'ಅಯೋಧ್ಯೆ' ಟ್ವೀಟ್ ದೇಶದಾದ್ಯಂತ ಚರ್ಚೆ

Update: 2020-08-05 17:25 GMT

ಬೆಂಗಳೂರು, ಆ.5 : ಬುಧವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸುವುದಕ್ಕೂ ಮುನ್ನಾ ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್‍ವೊಂದು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ! ಎಂಬ ಸಾಲುಗಳ ಮೂಲಕ ಶೋಭಾ ಕರಂದ್ಲಾಜೆ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ, ರಾಮನನ್ನು ಬಾಲಕನಂತೆ, ಮೋದಿಯನ್ನು ಹಿರಿಯನಂತೆ ಚಿತ್ರೀಕರಿಸಿ ಮೋದಿ ರಾಮನ ಕೈ ಹಿಡಿದು ದೇಗುಲಕ್ಕೆ ಕರೆದೊಯ್ಯುತ್ತಿರುವಂತೆ ಬಿಂಬಿಸಲಾಗಿದೆ.

ಈ ಚಿತ್ರ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೋದಿ ರಾಮನಿಗಿಂತಲೂ ದೊಡ್ಡವರೇ? ಮೋದಿ ರಾಮನನ್ನು ಮೀರಿದವರೇ ಎಂಬ ಹಲವಾರು ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೆ, ಚಿತ್ರವನ್ನು ಅಳಿಸುವಂತೆಯೂ ಹಲವರು ಸಲಹೆ ನೀಡಿದ್ದಾರೆ. ಕೆಲ ಮಂದಿ ಚಿತ್ರವನ್ನು ಮೆಚ್ಚಿದ್ದಾರೆ. ಆದರೆ, ಬಹುತೇಕರು ಚಿತ್ರದ ಸನ್ನಿವೇಶವನ್ನು ವಿರೋಧಿಸಿದ್ದಾರೆ.

ಹಲವರಿಂದ ಮೆಚ್ಚುಗೆ: ಶೋಭಾ ಕರಂದ್ಲಾಜೆಯ ಈ ಚಿತ್ರವನ್ನು 2771 ಮಂದಿ ಯಾವುದೇ ಅಭಿಪ್ರಾಯವಿಲ್ಲದೇ, ವಿರೋಧವಿಲ್ಲದೇ ರೀಟ್ವೀಟ್ ಕೂಡ ಮಾಡಿಕೊಂಡಿದ್ದಾರೆ. ಈ ಮೂಲಕ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ವಿರೋಧ ಚರ್ಚೆಗಳು ಹೀಗಿವೆ:

ಹಿಂದುತ್ವದ ಪ್ರಕಾರ ಮೋದಿ ರಾಮನನ್ನು ಮುನ್ನಡೆಸುತ್ತಾನೆ. ರಾಮ ಮೋದಿಯನ್ನು ಮುನ್ನಡೆಸುವುದಿಲ್ಲ? ಇದು ಹಿಂದೂ ಧರ್ಮವಲ್ಲ,’ ಎಂದು ಲೇಖಕ, ಇತಿಹಾಸ ತಜ್ಞ ದೇವದತ್ತ ಪಟ್ಟನಾಯಕ ಕುಟುಕಿದ್ದಾರೆ.

ಪ್ರೀತಿಯನ್ನೂ ಕಲಿತಿಲ್ಲ, ತ್ಯಾಗವನ್ನು ಕಲಿತಿಲ್ಲ
ಕರುಣೆ, ಪ್ರೇಮವನ್ನೂ ಕಲಿತಿಲ್ಲ
ರಾಮನಿಗಿಂತಲೂ ಮೇಲು ಎಂದು ತೋರಿಸುವ ನೀನು
ಶ್ರೀ ರಾಮಚರಿತ ಮಾನಸದ ಯಾವ ಭಾಗ ಕಲಿತಿರುವೆ?
ಎಂದು ಕಾಂಗ್ರೆಸ್ ನಾಯಕ ಶಶಿತರೂರ್ ಶೋಭಾರನ್ನು ಪ್ರಶ್ನೆ ಮಾಡಿದ್ದಾರೆ.

ಸಂಸದರಾಗಿ ಶೋಭಾ ಹಿಂದೂಗಳ ನಂಬಿಕೆಗೆ ಅಪಮಾನ ಮಾಡಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ದಿಲ್ಲಿ ಸರಕಾರದ ಹೆಚ್ಚುವರಿ ಕಾನೂನು ಸಲಹೆಗಾರ ರಿಷಿಕೇಶ್‍ ಕುಮಾರ್ ಹೇಳಿದ್ದಾರೆ.

‘ನಾಚಿಕೆಯಾಗಬೇಕು ಶೋಭಾ ಅವರಿಗೆ. ಇಂದು ಶ್ರೀರಾಮನ ದೇವಾಲಯಕ್ಕೆ ಅಡಿಪಾಯ ಹಾಕಲಾಗುತ್ತಿದೆ. ಮೋದಿ ವೈಭವದ ದಿನಗಳಿಗೆ ಅಲ್ಲ ಎಂದು ಹಿಂದಿ ಲೇಖಕ ಅಭಿಸಾರ್ ಶರ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ನಾವೆಲ್ಲ ಇಲ್ಲಿ ಏನನ್ನು ಹೇಳಲು ಹೊರಟಿದ್ದೇವೆ? ಸರ್ವೋಚ್ಚ ನಾಯಕನು ದೇವರಿಗಿಂತಲೂ ಮಿಗಿಲು ಎಂದಲ್ಲವೇ ಎಂದು ಲಾಡಾ ಗುರುದೇನ್ ಸಿಂಗ್ ಎಂಬ ಯುವ ಸಿನಿಮಾ ನಿರ್ದೇಶಕ ಪ್ರಶ್ನೆ ಮಾಡಿದ್ದಾರೆ.

ಮೋದಿ ರಾಮನಿಗಿಂತ ದೊಡ್ಡವರಲ್ಲ. ಇದು ಅಗ್ಗ ರಾಜಕೀಯ ಹಾಗೂ ವ್ಯಕ್ತಿಪೂಜೆ. ಹೀಗೆ, ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಪತ್ರಕರ್ತೆ ಸ್ವಾತಿ ಚತುರ್ವೇದಿ ಹೇಳಿದ್ದಾರೆ.

ಇಂದು, ಭಗವಂತ ರಾಮನನ್ನು ಚಿಕ್ಕವನನ್ನಾಗಿ ಮಾಡಲಾಗಿದೆ. ಇಂದು ರಾಮನೂ ಕೂಡ ಮೋದಿಯ ಬೆರಳನ್ನು ಹಿಡಿದು ನಡೆಯುವಂತಾಯಿತು ಎಂದು ಪತ್ರಕರ್ತೆ ರೋಹಿಣಿ ಸಿಂಗ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News