ಕೋವಿಡ್ ಕರ್ತವ್ಯಕ್ಕೆ ಗೈರಾದ 3 ಸಾವಿರ ಸಿಬ್ಬಂದಿಗೆ ನೋಟಿಸ್: ಡಾ.ಸಿ.ಎನ್.ಅಶ್ವತ್ಥ ನಾರಾಯಣ

Update: 2020-08-07 14:19 GMT

ಬೆಂಗಳೂರು, ಆ.7: ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಪರಿಸ್ಥಿತಿಯನ್ನು ಶುಕ್ರವಾರ ಅವಲೋಕಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕರ್ತವ್ಯಕ್ಕೆ ಗೈರಾದ ಮೂರು ಸಾವಿರ ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ಶುಕ್ರವಾರ ನಗರದಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಪಶ್ಚಿಮ ವಲಯಕ್ಕೆ 6,500 ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಲ್ಲಿ ಮೂರು ಸಾವಿರ ಮಂದಿ ಬಂದಿಲ್ಲ. ಹೀಗಾಗಿ ವಲಯದ ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಘೋಷ್ ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ 700 ಮಂದಿ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರಕಾರಿ ನೌಕರರು ಇದರಲ್ಲಿ ಸೇರಿದ್ದಾರೆ ಎಂದರು.

ಸಿಬ್ಬಂದಿ ಕೊರತೆಯಿಂದಾಗಿ ಶಂಕಿತ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹ ಹೆಚ್ಚು ಪ್ರಮಾಣದಲ್ಲಿ ಮಾಡಲು ಕಷ್ಟ ಆಗುತ್ತಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಒದಗಿಸುವಂತೆ ಆಯುಕ್ತ ಪಿ.ಪ್ರದೀಪ್‍ಗೆ ಅವರು ಸೂಚಿಸಿದರು. ಅಲ್ಲದೆ, ಲ್ಯಾಬ್ ಟೆಕ್ನಿಷಿಯನ್‍ಗಳ ಕೊರತೆ ಇದ್ದು ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಖಾಸಗಿ ಆಸ್ಪತ್ರೆಗೆ ಖುದ್ದು ಹೋಗಿ ಮಾತನಾಡಿ: ಕೆಲವು ಖಾಸಗಿ ಆಸ್ಪತ್ರೆಗಳು ನಿಗದಿ ಪ್ರಕಾರ ಬೆಡ್ ಕೊಡುತ್ತಿಲ್ಲ ಎನ್ನುವ ಆರೋಪಗಳು ಇದ್ದು ಈ ಬಗ್ಗೆ ಅಧಿಕಾರಿಗಳು ಖುದ್ದು ಹೋಗಿ ಪರಿಶೀಲಿಸಬೇಕು. ತಪ್ಪು ಎಸಗಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಸೂಚಿಸಿದರು.

ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಿದ್ದರ ಬಗ್ಗೆ ಘೋಷ್ ಉಪ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು. ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ನಿಗದಿಯಂತೆ ಬೆಡ್‍ಗಳನ್ನು ನೀಡುತ್ತಿಲ್ಲ ಎನ್ನುವ ದೂರುಗಳು ಬಂದಿದ್ದು ಅದರ ಪರಿಶೀಲನೆಗೂ ಉಪ ಮುಖ್ಯಮಂತ್ರಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News