ಕೊಡಗಿನಲ್ಲಿ ಹಲವು ಕಡೆ ಭೂಕುಸಿತ : ತಲಕಾವೇರಿ ಕಾರ್ಯಾಚರಣೆಗೆ ಅಡ್ಡಿ

Update: 2020-08-07 15:40 GMT

ಮಡಿಕೇರಿ ಆ.7 : ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಹಲವು ಕಡೆ ಭೂಕುಸಿತ ಉಂಟಾಗಿದೆ. ಪ್ರವಾಹ ಪರಿಸ್ಥಿತಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ನೂರಾರು ಮನೆಗಳು ಜಲಾವೃತಗೊಂಡು ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. 

ಬ್ರಹ್ಮಗಿರಿ ಬೆಟ್ಟಕುಸಿದು ಐವರು ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಜೆಸಿಬಿ ಮತ್ತು ಇಟಾಚಿ ಯಂತ್ರಗಳನ್ನು ದುರಂತ ನಡೆದ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾಗಿ ಪ್ರವಾಹದ ನೀರು ತಗ್ಗಿದರೆ ಶನಿವಾರ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಸಚಿವ ಸೋಮಣ್ಣ ಭೇಟಿ

ತಲಕಾವೇರಿ ಸಮೀಪ ಬ್ರಹ್ಮಗಿರಿ ಬೆಟ್ಟ ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಭೂ ಕುಸಿತ ಪ್ರದೇಶ ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು, ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ತಲಕಾವೇರಿ ದೇವಾಲಯ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಕುಟುಂಬದ ಮೂವರು ಮತ್ತು ಸಹ ಅರ್ಚಕರು ಇಬ್ಬರು ಸೇರಿ, ಒಟ್ಟು 5 ಮಂದಿ ಕಣ್ಮರೆಯಾಗಿದ್ದು, ಮಳೆ ಕಡಿಮೆಯಾದ ತಕ್ಷಣ ಕಾರ್ಯಾಚರಣೆ ಆರಂಭಿಸಲಾಗುವುದು. ಈಗಾಗಲೇ ಎನ್‍ಡಿಆರ್‍ಎಫ್ ತಂಡ ಬೀಡು ಬಿಟ್ಟಿದೆ ಎಂದು ಸಚಿವರು ತಿಳಿಸಿದರು.

ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಾಗೆಯೇ ವಿದ್ಯುತ್ ಮಾರ್ಗ ಸರಿಪಡಿಸುವುದು, ಮರಗಳು ರಸ್ತೆ ಮತ್ತು ವಿದ್ಯುತ್ ಕಂಬಕ್ಕೆ ತುಂಡಾಗಿ ಬದ್ದಲ್ಲಿ ತಕ್ಷಣವೇ ತೆರವು ಮಾಡುವ ಕಾರ್ಯ ನಡೆಯುತ್ತಿದೆ. ರಸ್ತೆ ಭಾಗದಲ್ಲಿ ಬರೆ ಕುಸಿದಲ್ಲಿ ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ವಿ.ಸೋಮಣ್ಣ ಅವರು ವಿವರಿಸಿದರು.

ಆರೆಂಜ್ ಅಲರ್ಟ್ ಘೋಷಣೆ

ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಆ.8 ರ ಬೆಳಗ್ಗೆಯಿಂದ ಆ.11 ರ ಬೆಳಗ್ಗೆವರೆಗೆ ಆರೆಂಜ್ ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.

ಮುಂದಿನ ದಿನಗಳಲ್ಲಿ ಮುಂಗಾರು ಮಳೆಯ ಹೆಚ್ಚಾಗುವ ಸಂಭವ ಇದ್ದು, ಆಗಾಗ್ಗೆ ಹೊರಡಿಸುವ ಹವಾಮಾನ ಮುನ್ಸೂಚನೆಗಳನ್ನು ಗಮನಿಸಲು ಕೋರಿದೆ. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24X7 ಕಂಟ್ರೋಲ್ ರೂಂ 08272-221077 ವಾಟ್ಸ್ ಆ್ಯಪ್ : 8550001077 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಗೂ ಅಪಾಯದ ಆತಂಕ 

ಮಡಿಕೇರಿ ಮೂಲಕ ಹಾದು ಹೋಗುವ ಮಂಗಳೂರು ರಸ್ತೆಯಲ್ಲಿ ಬರೆ ಕುಸಿತವಾಗುತ್ತಿದ್ದು, ಇದರ ಪರಿಣಾಮ ರಸ್ತೆ ಪಕ್ಕದಲ್ಲೇ ಇರುವ ಜಿಲ್ಲಾಡಳಿತದ ಕಚೇರಿಗಳ ಸಂಕೀರ್ಣದ ಬೃಹತ್ ಕಟ್ಟಡ ಆತಂಕ ಎದುರಿಸುತ್ತಿದೆ.

ಕಟ್ಟಡದ ಪಕ್ಕದಲ್ಲೇ ಬರೆ ಕುಸಿದಿದ್ದು, ಪ್ಲಾಸ್ಟಿಕ್ ಶೀಟ್ ಗಳನ್ನು ಹಾಕಿ ಸಂರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಕಟ್ಟಡದ ಸುರಕ್ಷತೆಗೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವುದರಿಂದ ಮಣ್ಣು ಕುಸಿದರೆ ಕಚೇರಿ ಸಂಕೀರ್ಣಕ್ಕೂ ಹಾನಿಯಾಗುವ ಸಾಧ್ಯತೆಗಳಿದೆ. ಇದನ್ನು ಮನಗಂಡು ಪ್ರಮುಖ ಕಚೇರಿಗಳನ್ನು ಮಡಿಕೇರಿ ನಗರಸಭೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಳೆಹಾನಿಯ ತುರ್ತು ಕಾರ್ಯಗಳು ನಗರಸಭೆಯ ಕಟ್ಟಡದಿಂದಲೇ ನಡೆಯಲಿದೆ. ಜಿಲ್ಲಾಧಿಕಾರಿಗಳು ಕೂಡ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News