ದಲಿತರಿಬ್ಬರ ಮೇಲೆ ಹಲ್ಲೆ ಪ್ರಕರಣ : ಬಜರಂಗ ದಳದ ಕಾರ್ಯಕರ್ತರ ಸಹಿತ 18 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2020-08-07 18:14 GMT

ಸಕಲೇಶಪುರ, ಆ.7: ಖರೀದಿಸಿದ ದನಗಳನ್ನು ಸಾಗಿಸುತ್ತಿದ್ದ ವೇಳೆ ದಲಿತರಿಬ್ಬರ ಮೇಲೆ ನಡೆಸಿದ ಹಲ್ಲೆ ಪ್ರಕರಣ ಸಂಬಂಧ ಬಜರಂಗ ದಳದ 7 ಕಾರ್ಯಕರ್ತರು ಸೇರಿದಂತೆ 18 ಮಂದಿಯ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯರಾಜ್ (43) ಮತ್ತು ನಿಂಗರಾಜ್ (40) ಹಲ್ಲೆಗೊಳಗಾದವರು.

ಸಮೀಪದ ಹೆಬ್ಬನಳ್ಳಿ ಗ್ರಾಮದವರಾಗಿದ್ದು, ತಾಲೂಕು ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗ ದಳದ ರಾಜ್ಯ ಸಂಚಾಲಕ ರಘು, ಶೇಖರ ಪೂಜಾರಿ, ಕೌಶಿಕ್, ರಘು, ಯೋಗೇಶ್, ಮನೋಹರ, ಗಿರೀಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತಿಬ್ಬರು ಯುವಕರು ಹಲ್ಲೆಗೆ ಒಳಗಾದ ಬಗ್ಗೆ ಬಜರಂಗ ದಳದ 10 ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅಬ್ದುಲ್ ಮುತ್ತಲಿಬ್ ಮತ್ತು ಅಜ್ವಾನ್ ಹಲ್ಲೆಗೊಳಗಾದವರಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ವಿವರ

ಹೆಬ್ಬನಹಳ್ಳಿ ಗ್ರಾಮದ ನಾಗೇಶ್ ಎಂಬವರಿಂದ ಖರೀದಿಸಿದ ದನಗಳನ್ನು ಇಸ್ಮಾಯಿಲ್ ಎಂಬವರ ಮನೆಗೆ ಸಾಗಿಸುತ್ತಿದ್ದ ವೇಳೆ ಹಲಸುಲಿಗೆ ಸಮೀಪ ದಾರಿ ಮಧ್ಯೆ ಕಾರು ಹಾಗೂ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು, ದನಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಥಳಿಸಿದ್ದಾರೆ. ಅಮಾಯಕರನ್ನು ಅಪರಿಚಿತರು ಥಳಿಸುತ್ತಿರುವುದನ್ನು ಕಂಡ ಸ್ಥಳೀಯರು ಹಲ್ಲೆಯನ್ನು ತಡೆಯಲು ಮುಂದಾಗಿದ್ದಾರೆ. ತಡೆಯಲು ಬಂದವರ ಮೇಲೆ ಕೂಡಾ ಹಲ್ಲೆ ನಡೆಸಲು ಮುಂದಾದ ಬಜರಂಗ ದಳದ ಕಾರ್ಯಕರ್ತರನ್ನು ಗ್ರಾಮಸ್ಥರು ತಡೆದಿದ್ದಾರೆ  ಎಂದು ತಿಳಿದುಬಂದಿದೆ.

ಪ್ರತಿದೂರು

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲಸುಲಿಗೆ ಗ್ರಾಮದ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆಂದು ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಖಾದರ್, ಹಸೈನಾರ್, ರಿಝ್ವಾನ್, ಮುತಲಿಬ್, ಅಫ್ರೀದ್, ಅಶ್ಫಕ್, ಆಸೀಫ್, ಖಲಂದರ್ ಮತ್ತು ಹೈದರ್ ವಿರುದ್ಧ ಹಲ್ಲೆ ಮತ್ತು ಬಜರಂಗ ದಳದ ದಲಿತ ಕಾರ್ಯಕರ್ತರ ದೂರಿನ ಅನ್ವಯ ಅಟ್ರಾಸಿಟಿ ಸೇರಿದಂತೆ 307 ಕಲಂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News