ಓ ಮೆಣಸೇ...

Update: 2020-08-09 19:30 GMT

ಯಡಿಯೂರಪ್ಪ ಸರಕಾರ ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ಮುಚ್ಚಿ ಹಾಕಿದೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ನೀವು ಅಗೆದು ತೆಗೆಯಿರಿ.


ಕೊರೋನ ವೈರಸ್ ಆರಂಭದಲ್ಲಿ ಎಷ್ಟಿತ್ತೋ ಈಗಲೂ ಅಷ್ಟೇ ಅಪಾಯಕಾರಿಯಾಗಿದೆ - ನರೇಂದ್ರ ಮೋದಿ, ಪ್ರಧಾನಿ

ಆದರೂ ಅದಿನ್ನೂ ಸಂಘಪರಿವಾರದವರಷ್ಟು ಅಪಾಯಕಾರಿಯಾಗಿಲ್ಲ.


ಕಾಂಗ್ರೆಸ್ - ಜೆಡಿಎಸ್ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದವರ ಋಣ ನಮ್ಮ ಮೇಲಿದೆ
 - ಕೆ.ಎಸ್.ಈಶ್ವರಪ್ಪ, ಸಚಿವ

ಮತದಾರರ ಋಣದಿಂದ ಮುಕ್ತರಾಗಿದ್ದೀರಿ ಎಂದಾಯಿತು.


ವಿರೋಧ ಮಾಡಬೇಕು ಎನ್ನುವ ಉದ್ದೇಶದಿಂದ ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದಾರೆ - ಶಶಿಕಲಾ ಜೊಲ್ಲೆ, ಸಚಿವೆ
ವಿರೋಧ ಮಾಡಬಾರದು ಎಂದು ವಿರೋಧ ಮಾಡಬೇಕಾಗಿತ್ತೇ?


ಸಂಕಷ್ಟದ ನಾಯಕತ್ವ ಎಂದರೆ ಯಡಿಯೂರಪ್ಪ - ಆರ್.ಅಶೋಕ್, ಸಚಿವ
 ಸಂಕಷ್ಟದ ರೂಪದಲ್ಲಿ ನೀವು ಮತ್ತು ನಿಮ್ಮ ಬಣ ಇರುವಾಗ ಇನ್ನೇನಾಗುತ್ತದೆ?


  ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಅವಕಾಶವಿಲ್ಲ - ಬಸವರಾಜ ಬೊಮ್ಮಾಯಿ, ಸಚಿವ 

ಸದ್ಯಕ್ಕೆ ಅದರ ಹೊಣೆಗಾರಿಕೆಯನ್ನು ಕೊರೋನ ಹೊತ್ತುಕೊಂಡಿದೆ.


ನಮ್ಮದು ಮೂರು ಚಕ್ರದ ಸರಕಾರವಾದರೂ ಸ್ಟೇರಿಂಗ್ ನನ್ನ ಬಳಿಯೇ ಇದೆ -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ವಾಹನ ಇಲ್ಲದೆ ಬರೇ ಸ್ಟೇರಿಂಗ್‌ನ್ನು ಇಟ್ಟುಕೊಂಡು ಏನು ಮಾಡುತ್ತೀರಿ?


ನನ್ನನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು - ಶ್ರೀರಾಮುಲು, ಸಚಿವ
 ಹಾಗಾದರೆ, ನೀವೇ ಸೈಡ್‌ಗೆ ಬಂದು ನಿಂತದ್ದೋ?


ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿವೃತ್ತ ಕುದುರೆಗಳು - ಸಿ.ಪಿ.ಯೋಗೇಶ್ವರ್, ವಿ.ಪ.ಸದಸ್ಯ
ಪರವಾಗಿಲ್ಲ, ಹಾಲಿ ಕತ್ತೆಗಿಂತ ವಾಸಿ ಎಂದರಂತೆ.


ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ತೋರುವ ರಾಷ್ಟ್ರಗಳಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲು ಭಾರತ ಸಿದ್ಧವಿದೆ
- ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ
ಸದ್ಯಕ್ಕೆ ಅವರು ಗೋರಕ್ಷಣೆ ಹೇಗೆ ಮಾಡಬಾರದು ಎನ್ನುವುದನ್ನು ಭಾರತದಿಂದ ಕಲಿಯುತ್ತಿದ್ದಾರೆ.


ರಾಮ ರಾಜ್ಯಕ್ಕಾಗಿ 'ಅಪರೇಶನ್ ಕಮಲ'ಕ್ಕೂ ಸಿದ್ಧ - ನಳಿನ್ ಕುಮಾರ್ ಕಟೀಲು, ಸಂಸದ

ರಾಮನ ಕಾಲದ 'ಆಪರೇಶನ್ ವಿಭೀಷಣ' ನೆನಪಿಗೆ ಬಂದಿರಬೇಕು.


ಶಾಸಕ ತಿಪ್ಪಾರೆಡ್ಡಿ ಮತ್ತು ನಾನು ಸಚಿವರಾಗುವ ದಿನಗಳು ದೂರವಿಲ್ಲ - ಉಮೇಶ್ ಕತ್ತಿ, ಶಾಸಕ

ಕತ್ತಿಯನ್ನು ಇನ್ನಷ್ಟು ಹರಿತ ಮಾಡಿ.


ಶ್ರೀರಾಮ, ಹಿಂದುತ್ವ ಈ ದೇಶದ ಆಸ್ತಿಯೇ ಹೊರತು ಬಿಜೆಪಿಯ ಸ್ವತ್ತಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಧ್ವಂಸಗೊಂಡ ಸಂವಿಧಾನ ಯಾರ ಸೊತ್ತು?


ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯರ ಒಪ್ಪಿಗೆಯ ಮೇರೆಗೆ ಆಗುತ್ತಿದೆ - ಕಮಲ್‌ನಾಥ್, ಕಾಂಗ್ರೆಸ್ ಮುಖಂಡ

ಬಾಬರಿ ಮಸೀದಿ ಮತ್ತು ಸಂವಿಧಾನ ಧ್ವಂಸ ಕಾಂಗ್ರೆಸ್ ಒಪ್ಪಿಗೆಯ ಮೇರೆಗೆ ನಡೆದಿರುವುದು ಎನ್ನುವುದು ದೇಶಕ್ಕೇ ಗೊತ್ತು.


ಕೆಲಸ ಹುಡುಕುವವರ ಬದಲು ಕೆಲಸ ಕೊಡುವವರನ್ನು ಸೃಷ್ಟಿಸುವುದೇ ಹೊಸ ಶಿಕ್ಷಣ ನೀತಿಯ ಮೂಲ ಆಶಯ
 - ನರೇಂದ್ರ ಮೋದಿ, ಪ್ರಧಾನಿ
ಕೆಲಸ ಕೊಡಬೇಕಾದರೆ, ಮೊದಲು ಏನಾದರೂ ಒಂದು ಕೆಲಸ ಮಾಡಬೇಕಲ್ಲವೇ?


ಕೇಂದ್ರ ಸರಕಾರವು ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ -ರಮೇಶ್ ಪೋಖ್ರಿಯಾಲ್, ಕೇಂದ್ರ ಸಚಿವ
 ಹೇರುವುದಕ್ಕೆ ರಾಜ್ಯವೇನು ಕತ್ತೆಯೇ?


ಕೊರೋನ ಹೆಸರಲ್ಲಿ ದುಡ್ಡು ಹೊಡೆದಿರುವುದೇ ಯಡಿಯೂರಪ್ಪ ಸರಕಾರದ ಸಾಧನೆ - ಡಾ.ಜಿ.ಪರಮೇಶ್ವರ್, ಮಾಜಿ ಉಪ ಮುಖ್ಯಮಂತ್ರಿ

 ಅದರಲ್ಲಿ ಪಾಲು ಹಂಚಿಕೊಂಡಿರುವುದು ನಿಮ್ಮ ಸಾಧನೆಯಾಗಿರಬೇಕು.


ನಮ್ಮತನ ಕಾಣಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಿದೆ
 - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಜಾತೀಯತೆಯಲ್ಲಿ ನಮ್ಮತನವೇ?


ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು - ವಿ.ಸೋಮಣ್ಣ , ಸಚಿವ

ಸದ್ಯಕ್ಕೆ ಕಲ್ಲುಗಳ ನಡುವೆ ಮೊಸರು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.


ಸಾಧಕರನ್ನು ಸೃಷ್ಟಿಸುವ ಮತ್ತು ದೇಶದ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ
-ನಳಿನ್ ಕುಮಾರ್ ಕಟೀಲು, ಸಂಸದ

ಸಮಯ ಸಾಧಕರನ್ನು ಸೃಷ್ಟಿಸುವ ಎಂದರೆ ಚೆನ್ನಾಗಿರುತ್ತದೆ.


ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಹಿಡಿಯುವುದೇ ಮುಖ್ಯವಾಗಿದೆ
-ದೇವೇಗೌಡ, ಮಾಜಿ ಪ್ರಧಾನಿ
ಅಧಿಕಾರ ನಿಮಗೆ ಬೇಡವೇ?


ಪಕ್ಷದ ಪೋಸ್ಟರ್ ಅಂಟಿಸುತ್ತಿದ್ದ ಕಾರ್ಯಕರ್ತ ಅಮಿತ್ ಶಾ ದೇಶದ ಗೃಹ ಸಚಿವರಾಗುವುದು ಬಿಜೆಪಿಯಂತಹ ಕಾರ್ಯಕರ್ತರ ಪಕ್ಷದಲ್ಲಿ ಮಾತ್ರ ಸಾಧ್ಯ
- ಪ್ರತಾಪ ಸಿಂಹ, ಸಂಸದ

ಆತ ಪೋಸ್ಟರ್ ಅಂಟಿಸುತ್ತಲೇ ಇದ್ದಿದ್ದರೆ ದೇಶಕ್ಕೆ ದೊಡ್ಡ ಉಪಕಾರವಾಗುತ್ತಿತ್ತು.


ಹಿರಿತನಕ್ಕೆ, ಸಂಸ್ಕಾರಕ್ಕೆ, ಪರಂಪರೆಗೆ ಕಾಲು ಹಿಡಿಯುವುದು ತಪ್ಪಲ್ಲ
 - ಸಿ.ಟಿ.ರವಿ, ಸಚಿವ
 ಹಾಗೆಂದು ಕತ್ತೆಯ ಕಾಲು ಹಿಡಿಯುವುದು ಸರಿಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...