ರಾಜ್ಯದಲ್ಲಿ ಇಮ್ಯುನಾಲಜಿ, ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ: ಡಿಸಿಎಂ ಡಾ.ಅಶ್ವತ್ಥ ನಾರಾಯಣ

Update: 2020-08-10 17:10 GMT

ಬೆಂಗಳೂರು, ಆ. 10: ಭವಿಷ್ಯದ ದಿನಗಳಲ್ಲಿ ಇಮ್ಯುನಾಲಜಿ ಅಧ್ಯಯನವು ಅತ್ಯಂತ ಪ್ರಮುಖವಾಗಲಿದ್ದು, ಇದನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದಲ್ಲಿ ಅಮೆರಿಕದ ಅಟ್ಲಾಂಟಾದ ಎಮೊರಿ ಲಸಿಕಾ ಕೇಂದ್ರದ ಸಹಯೋಗದೊಂದಿಗೆ ಇಮ್ಯುನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರಕಾರ ಉತ್ಸುಕವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಸೋಮವಾರ ಲಸಿಕಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾಲಯದ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಅವರೊಂದಿಗೆ ವೆಬಿನಾರ್ ಮೂಲಕ ವಿಚಾರ ವಿನಿಮಯ ಸಭೆಯಲ್ಲಿ ಮಾತನಾಡಿದ ಅವರು, ಲಸಿಕೆಗಳು, ಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ಸಂಶೋಧನೆ ಇವೆಲ್ಲವೂ ಅಂತಿಮವಾಗಿ `ಇಮ್ಯುನಾಲಜಿ' ವ್ಯಾಪ್ತಿಗೆ ಬರುತ್ತವೆ. ಇಮ್ಯುನಾಲಜಿ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಉತ್ತರ ಒದಗಿಸಬಲ್ಲವು. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಈಗ ಈ ಕ್ಷೇತ್ರದ ಮೇಲಿನ ಹೂಡಿಕೆಯು ಫಲಪ್ರದ ಫಲಿತಾಂಶಗಳನ್ನು ನೀಡಲಿದೆ ಎಂದರು.

ಈಗ ಇಡೀ ಜಗತ್ತೇ `ಇಮ್ಯುನಾಲಜಿ' ಬಗ್ಗೆ ಆಲೋಚಿಸುತ್ತಿರುವ ಹಾಗೂ ಪರಿಣಾಮಕಾರಿ `ಲಸಿಕೆ'ಗೆ ಎದುರು ನೋಡುತ್ತಿರುವ ಸಂದರ್ಭ ಇದಾಗಿದೆ. ಇಂತಹ ಸಮಯದಲ್ಲಿ `ಇಮ್ಯೂನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರ'ದ ಸ್ಥಾಪನೆ ಅತ್ಯಂತ ಸಂದರ್ಭೋಚಿತ ಎಂದ ಅವರು, ಕೋವಿಡ್-19 ರೋಗ ದೃಢೀಕರಣದ ಆಧುನಿಕ ವಿಧಾನಗಳ ಅಭಿವೃದ್ಧಿ ಬಗ್ಗೆಯೂ ರಾಜ್ಯ ಸರಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಇದು ಈಗಿನ ಸನ್ನಿವೇಶದಲ್ಲಿ ಸೂಕ್ಷ್ಮ ಸಂಗತಿಯೂ ಆಗಿದ್ದು, ಈ ದಿಸೆಯಲ್ಲಿ ಸಹಭಾಗಿತ್ವದಿಂದ ಹೆಚ್ಚಿನ ಪ್ರಯೋಜನವನ್ನು ನಿರೀಕ್ಷಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಪೂರಕವಾದ ವಾತಾವರಣ ಇದೆ. ಇದನ್ನು ಬಳಸಿಕೊಂಡು ಲಸಿಕೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಕ್ಲಿನಿಕಲ್ ಟ್ರಯಲ್‍ಗಳು, ಸಂಶೋಧನೆಗಳ ಫಲವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಇತ್ಯಾದಿ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಸದ್ಯದ ಅಗತ್ಯವಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ ಇದೇ ವೇಳೆ ತಿಳಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಏನಿಲ್ಲವೆಂದರೂ ಸುಮಾರು 20 ಉತ್ಕೃಷ್ಠ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವೆಲ್ಲವನ್ನೂ ಒಂದೆಡೆ ಕೇಂದ್ರೀಕರಿಸಿ ಲಸಿಕಾ ಸಂಬಂಧಿ ಚಟುವಟಿಕೆಗಳಿಗೆ ಒತ್ತು ನೀಡಬೇಕಾಗಿದೆ. ಇದಕ್ಕೆ ಪೂರಕವಾದ ನೀತಿಯನ್ನು ಸರಕಾರ ರೂಪಿಸಲಿದೆ. ಕ್ಲಿನಿಕಲ್ ಟ್ರಯಲ್‍ಗೆ ಸಂಬಂಧಿಸಿದಂತೆ ದೇಶದಲ್ಲಿ ಮುಂಚೆ ಹಲವಾರು ಕಟ್ಟುಪಾಡುಗಳಿದ್ದವು. ಆದರೆ, ಅನಗತ್ಯ ಕಟ್ಟುಪಾಡುಗಳನ್ನು ಈಗ ಸಡಿಲಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಡಾ.ರಫಿ ಅಹಮ್ಮದ್ ಮಾತನಾಡಿ, ಎಮೊರಿ ಲಸಿಕಾ ಕೇಂದ್ರವು ಸದ್ಯ ಅತ್ಯಂತ ನಿಖರತೆಯಿಂದ ಕೂಡಿದ ಅತ್ಯಾಧುನಿಕ ಕ್ಷಿಪ್ರ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಅಟ್ಲಾಂಟಾದ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಪ್ಲಾಸ್ಮಾ ಥೆರಪಿ, ಹ್ಯೂಮನ್ ಮಾಲಿಕ್ಯುಲಾರ್ ಆಂಟಿಬಾಡೀಸ್ ಇವು ಎಮೊರಿ ಕೇಂದ್ರವು ಸಂಶೋಧನಾ ಕಾರ್ಯನಿರತವಾಗಿರುವ ಇನ್ನಿತರ ಪ್ರಮುಖ ಕ್ಷೇತ್ರಗಳಾಗಿವೆ ಎಂದು ವಿವರಿಸಿದರು.

ಕರ್ನಾಟಕ ಮತ್ತು ಎಮೊರಿ ಲಸಿಕಾ ಕೇಂದ್ರದ ನಡುವೆ ಶೈಕ್ಷಣಿಕ ಸಹಭಾಗಿತ್ವ ಸಾಧಿಸಲು ಅವಕಾಶವಿದೆ. ಸದ್ಯಕ್ಕೆ ಆನ್‍ಲೈನ್ ಮೂಲಕವೇ ಇದನ್ನು ಆರಂಭಿಸಬಹುದು. ಅಲ್ಲಿನ ವಿದ್ಯಾರ್ಥಿಗಳು, ಇಲ್ಲಿನ ವಿದ್ಯಾರ್ಥಿಗಳು, ಸಂಶೋಧಕರ ನಡುವೆ ಪರಸ್ಪರ ವಿಚಾರ ವಿನಿಮಯಕ್ಕೆ ಇದರಿಂದ ಅವಕಾಶವಾಗಲಿದೆ. ವಿಶೇಷವಾಗಿ ಪಿಎಚ್‍ಡಿ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅಧಿಕ ಪ್ರಯೋಜನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿರೋಧ ಅಧ್ಯಯನ ಕ್ಷೇತ್ರವು ಎಮೊರಿ ಲಸಿಕಾ ಕೇಂದ್ರದ ಪ್ರಮುಖ ಕಾರ್ಯಕ್ಷೇತ್ರವಾಗಿದೆ. ವಿಶೇಷವಾಗಿ ಕ್ಯಾನ್ಸರ್ ಇಮ್ಯೂನೋ ಥೆರಪಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ಒತ್ತು ನೀಡಲಾಗಿದೆ ಎಂದರು. ರಾಜ್ಯ ಸರಕಾರದೊಂದಿಗೆ ಸಹಭಾಗಿತ್ವ ಸಾಧಿಸುವುದಕ್ಕೆ ಸಂಬಂಧಿಸಿದಂತೆ ಸದ್ಯವೇ ಪ್ರಸ್ತಾವ ಸಲ್ಲಿಸುವುದಾಗಿ ಅವರು ತಿಳಿಸಿದರು. ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News