ಕೋವಿಡ್19: ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಪ್ರಥಮ, ದ್ವಿತೀಯ ಸ್ಥಾನದಲ್ಲಿ ಬಳ್ಳಾರಿ

Update: 2020-08-11 11:52 GMT

ಬಳ್ಳಾರಿ, ಆ.11: ಕೋವಿಡ್ ಪ್ರಕರಣಗಳ ಅತೀವ ಹೆಚ್ಚಳದ ನಡುವೆಯೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ಹತ್ತು ದಿನಗಳ ಅವಧಿಯಲ್ಲಿ (ಜುಲೈ 31ರಿಂದ ಆಗಸ್ಟ್ 10) ಸೋಂಕು ದೃಢಪಟ್ಟ ಪ್ರಕರಣಗಳು ಮತ್ತು ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಪತ್ತೆ ಕುರಿತ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತವೆ.

ರಾಜ್ಯದ 30 ಜಿಲ್ಲೆಗಳಲ್ಲಿ ನಡೆದಿರುವ ಸಂಪರ್ಕ ಪತ್ತೆ ಕಾರ್ಯದಲ್ಲಿ ಬಾಗಲಕೋಟೆ ಜಿಲ್ಲೆಯು ಶೇ 5.8ರಷ್ಟು ಸಂಪರ್ಕಗಳ ಪತ್ತೆಯನ್ನಷ್ಟೇ ಬಾಕಿ ಉಳಿಸಿಕೊಂಡು ಮೊದಲ ಸ್ಥಾನದಲ್ಲಿದೆ. ಬಳ್ಳಾರಿ (ಶೇ 7.4) ಎರಡನೇ ಸ್ಥಾನ ಹಾಗೂ ಮೈಸೂರು (ಶೇ 9.1) ಮೂರನೇ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆಯು ಶೇ 94.1ರಷ್ಟು ಬಾಕಿ ಉಳಿಸಿಕೊಂಡು ಕೊನೇ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶೇ83.4)ಯಲ್ಲೂ ಸಾಧನೆ ನಿರಾಶಾದಾಯಕವಾಗಿದೆ.

ವಿಜಯಪುರ ಶೇ 80ರಷ್ಟು ಬಾಕಿ ಉಳಿಸಿಕೊಂಡಿದೆ. ಚಿತ್ರದುರ್ಗ ಮತ್ತು ಯಾದಗಿರಿ ಶೇ 60ಕ್ಕಿಂತ ಹೆಚ್ಚು ಬಾಕಿ ಉಳಿಸಿಕೊಂಡಿವೆ. ಉತ್ತರ ಕನ್ನಡ, ರಾಮನಗರ, ಬೆಳಗಾವಿ, ಕೊಡಗು, ತುಮಕೂರು, ಹಾವೇರಿ ಶೇ 50ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸಂಪರ್ಕ ಪತ್ತೆ ಮಾಡಿಲ್ಲ. ಕಲಬುರಗಿಯ ಸಾಧನೆಯೂ ಹೆಚ್ಚಿಲ್ಲ. ಬೆಂಗಳೂರು ನಗರ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು, ಶೇ 47.5ರಷ್ಟು ಸಂಪರ್ಕ ಪತ್ತೆ ಇನ್ನೂ ಆಗಿಲ್ಲ.

ಶಿಕ್ಷಕರ ಬಳಕೆ: ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರ ಪತ್ತೆಗೆ ಜಿಲ್ಲಾಡಳಿತವು ಪ್ರಮುಖವಾಗಿ ಶಿಕ್ಷಕರನ್ನೇ ನಿಯೋಜಿಸಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮೂಡಿಸಿರುವ ಆತಂಕದ ನಡುವೆಯೂ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದರಿಂದ ಸಂಪರ್ಕ ಪತ್ತೆ ಹಚ್ಚುವ ವಿಷಯದಲ್ಲಿ ಜಿಲ್ಲೆ ಗಣನೀಯ ಪರಿಶ್ರಮ ತೋರಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.

ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಶೀಘ್ರ ಪತ್ತೆ ಹಚ್ಚಿ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ಅಥವಾ ಕ್ವಾರಂಟೈನ್‍ ಗೆ ಸೇರಿಸಬೇಕು. ಅಗತ್ಯವಿಲ್ಲದಿದ್ದರೆ ಹೋಂ ಕ್ವಾರಂಟೈನ್‍ನಲ್ಲಿರಿಸಬೇಕು. ಇದು ಸೋಂಕು ತಡೆಗಟ್ಟಲು ಇರುವ ಪ್ರಮುಖ ದಾರಿ. ಈ ದಾರಿಯಲ್ಲಿ ಜಿಲ್ಲೆ ಅತಿ ಕಡಿಮೆ ಅವಧಿಯಲ್ಲಿ ಬಹುದೂರ ಕ್ರಮಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News