ಜಲಾಶಯದಿಂದ ನೀರು ಹರಿಸುವ ಮೊದಲೇ ನೆರೆ ರಾಜ್ಯಗಳಿಗೆ ಮಾಹಿತಿ: ಹೈಕೋರ್ಟ್ ಗೆ ಕೇಂದ್ರದ ಹೇಳಿಕೆ
ಬೆಂಗಳೂರು, ಆ.11: ಪ್ರವಾಹ ಪರಿಸ್ಥಿತಿ ಎದುರಾಗುವ ಸಂದರ್ಭದಲ್ಲಿ ಜಲಾಶಯಗಳಿಂದ ನದಿಗೆ ನೀರು ಹರಿಸುವ ಬಗ್ಗೆ ನೆರೆ ರಾಜ್ಯಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲು ಎಲ್ಲ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೈಕೋರ್ಟ್ ಗೆ ತಿಳಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಪ್ರವಾಹ ಸಂದರ್ಭದಲ್ಲಿ ಅಕ್ಕ-ಪಕ್ಕದ ರಾಜ್ಯಗಳಿಗೆ ಅನುಕೂಲ ಆಗುವಂತೆ ಮುನ್ನೆಚ್ಚರಿಕೆ ನೀಡಬೇಕೆಂದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ನಿರ್ದೇಶನ ನೀಡಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ನ್ಯಾಯಪೀಠಕ್ಕೆ ಮೊಮೊ ಸಲ್ಲಿಸಿತು.
ಜಲಾಶಯಗಳಿಂದ ನೀರು ಹರಿಬಿಡುವ ಬಗ್ಗೆ ನೆರೆ ರಾಜ್ಯಗಳಿಗೆ ಮಾಹಿತಿ ನೀಡಲು ಸರಳ ವಿಧಾನವನ್ನು ಕಂಡುಕೊಳ್ಳಬೇಕು. ಇದರಿಂದ, ಮನೆಗಳು ಹಾಗೂ ಜಮೀನುಗಳು ಜಲಾವೃತ ಆಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕಳೆದ ವಿಚಾರಣೆ ವೇಳೆ ತಿಳಿಸಿತ್ತು.