ಚಿತ್ರದುರ್ಗ: ಬಸ್‌ಗೆ ಬೆಂಕಿ, ಐವರು ಜೀವಂತ ದಹನ, 27 ಜನರು ಗಂಭೀರ

Update: 2020-08-12 06:08 GMT

ಚಿತ್ರದುರ್ಗ, ಆ.12: ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಐವರು ಪ್ರಯಾಣಿಕರು ಜೀವಂತ ದಹನವಾಗಿದ್ದು, 27 ಜನರು ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಬುಧವಾರ ಬೆಳಗ್ಗಿನ ಜಾವ ಜಿಲ್ಲೆಯ ಹಿರಿಯೂರು ತಾಲೂಕಿನ ಹೆದ್ದಾರಿಯಲ್ಲಿ ಸಂಭವಿಸಿದೆ.

32 ಪ್ರಯಾಣಿಕರಿದ್ದ ಬಸ್ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಸತ್ತವರ ಪೈಕಿ ಮಹಿಳೆ ಹಾಗೂ 2 ಮಕ್ಕಳು ಸೇರಿದ್ದಾರೆ.

ಇಂಜಿನ್ ಸಮಸ್ಯೆಯಿಂದಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಹಿರಿಯೂರು ಎಸ್ಪಿ ರಾಧಿಕಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಿರಿಯೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News