ಕೋವಿಡ್19: ರಾಜ್ಯದಲ್ಲಿಂದು 7,883 ಮಂದಿಗೆ ಪಾಸಿಟಿವ್, 113 ಮಂದಿ ಸೋಂಕಿಗೆ ಬಲಿ
ಬೆಂಗಳೂರು, ಆ.12: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಇಂದು ಮತ್ತೆ 7 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 2 ಲಕ್ಷದ ಸನಿಹದಲ್ಲಿದೆ.
ಮಂಗಳವಾರ ಸಂಜೆಯಿಂದ ಬುಧವಾರ ಸಂಜೆವರೆಗೆ ಮತ್ತೆ 7883 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,96,494 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 113 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 3510 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 23 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 11, ಬಳ್ಳಾರಿ 9, ದಕ್ಷಿಣ ಕನ್ನಡ 7, ಬೆಳಗಾವಿ 6, ದಾವಣಗೆರೆ 6, ಹಾಸನ 6, ತುಮಕೂರು 6, ರಾಯಚೂರು 4, ಶಿವಮೊಗ್ಗ 4, ಚಾಮರಾಜನಗರ, ಬೀದರ್, ಮಂಡ್ಯ, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ 3, ಕೊಪ್ಪಳ, ಧಾರವಾಡ, ವಿಜಯಪುರ, ಚಿಕ್ಕಮಗಳೂರು, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ತಲಾ 2, ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2802, ಬಳ್ಳಾರಿ 635, ಮೈಸೂರು 544, ಬೆಳಗಾವಿ 314, ಧಾರವಾಡ 269, ಉಡುಪಿ 263, ಹಾಸನ 258, ದಾವಣಗೆರೆ 239, ದಕ್ಷಿಣ ಕನ್ನಡ 229, ಕೊಪ್ಪಳ 202, ರಾಯಚೂರು 191, ಬೆಂಗಳೂರು ಗ್ರಾಮಾಂತರ 182, ಬಾಗಲಕೋಟೆ 170, ಗದಗ 148, ಕಲಬುರಗಿ 144, ಹಾವೇರಿ 132, ವಿಜಯಪುರ 121, ಮಂಡ್ಯ 121, ತುಮಕೂರು 121, ಚಿಕ್ಕಮಗಳೂರು 112, ಯಾದಗಿರಿ 107, ಬೀದರ್ 91, ಉತ್ತರ ಕನ್ನಡ 84, ಚಿಕ್ಕಬಳ್ಳಾಪುರ 81, ಶಿವಮೊಗ್ಗ 69, ಚಾಮರಾಜನಗರ 68, ರಾಮನಗರ 63, ಚಿತ್ರದುರ್ಗ 61, ಕೋಲಾರ 33, ಕೊಡಗು ಜಿಲ್ಲೆಯಲ್ಲಿ 29 ಪ್ರಕರಣಗಳು ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 1,96,494 ಕೊರೋನ ಸೋಂಕಿತರ ಪೈಕಿ 1,12,633 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 7034 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 3510 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 80,343 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.