ಗಾಂಜಾ ಮಾರಾಟಗಾರರಿಂದ ಪಿಎಸ್ಐ ಮೇಲೆ ಹಲ್ಲೆ

Update: 2020-08-12 17:47 GMT

ಶಿವಮೊಗ್ಗ, ಆ.12: ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಲು ಹೋಗಿದ್ದ ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಸಿ ಮಠಪತಿಯವರ ಮೇಲೆ ಹಲ್ಲೆ ನಡೆದಿದ್ದು, ಅವರನ್ನ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಬೆಳಗ್ಗೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಗಟ್ಟದಲ್ಲಿ ಮಧು ಮತ್ತು ಮನು ಎಂಬವರು ಗಾಂಜಾಗಳ ಪಾಕೆಟ್ ಗಳನ್ನ ಮಾಡಿ ಮಾರಾಟ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್ ಐ ನವೀನ್ ಮಠಪತಿ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಇಬ್ಬರು ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ಮಧು ಎಂಬಾತ ಹೆಡ್ ಕಾನ್ ಸ್ಟೇಬಲ್ ಬಸಂತಪ್ಪ ಎಂಬುವರನ್ನ ನೆಲಕ್ಕೆ ಬೀಳುವಂತೆ ತಳ್ಳಿದ್ದಾನೆ. ಬಸಂತಪ್ಪನವರನ್ನ ಪಿಎಸ್ ಐ ನವೀನ್ ಹಿಡಿದುಕೊಳ್ಳುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ನೆಲ ದಂಬಾಸ್ ಮಾಡುವ ರಾಡಿನಿಂದ ನವೀನ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಆದರೆ ತದನಂತರದ ಬೆಳವಣಿಗೆಯಲ್ಲಿ ಇವರಿಬ್ಬರನ್ನೂ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಎಡ ಕಿವಿಯ ಮೇಲೆ ಗಾಯಗೊಂಡ ಪಿಎಸ್ಐ ನವೀನ್ ಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News