ದಲಿತರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿ: ಬಿ.ಎಲ್.ಸಂತೋಷ್ ಗೆ ಝಮೀರ್ ಅಹ್ಮದ್ ತಿರುಗೇಟು

Update: 2020-08-13 13:51 GMT

ಬೆಂಗಳೂರು, ಆ.13: ಬಿ.ಎಲ್.ಸಂತೋಷ್ ಅವರೇ, ರಾಜ್ಯದ 224 ಶಾಸಕರಿಗೂ ರಕ್ಷಣೆ ನೀಡಬೇಕಾಗಿರುವುದು ಸರಕಾರದ ಕರ್ತವ್ಯ. ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರಕಾರಗಳಿವೆ, ಪೊಲೀಸ್ ಇಲಾಖೆ ನಿಮ್ಮ ಅಧೀನದಲ್ಲಿದೆ. ನಿಮ್ಮ ವೈಫಲ್ಯಕ್ಕೆ ಬೇರೆಯವರನ್ನು ಪ್ರಶ್ನಿಸಿದರೆ ಹೇಗೆ ಸ್ವಾಮಿ? ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಕಿಡಿಗಾರಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಆತ್ಮೀಯರಾದ ಅಖಂಡ ಶ್ರೀನಿವಾಸ ಮೂರ್ತಿಯವರು ದಲಿತ ಎಂಬ ಕಾರಣಕ್ಕೆ ನಮ್ಮ ಪಕ್ಷದಲ್ಲಿ ರಕ್ಷಣೆ ನೀಡುತ್ತಿಲ್ಲ ಎಂಬ ಬಿ.ಎಲ್.ಸಂತೋಷ್ ಅವರ ಆರೋಪ ಕೇವಲ ರಾಜಕೀಯ ಲಾಭಕ್ಕಷ್ಟೇ ಸೀಮಿತ. ಸಾಮಾಜಿಕ ನ್ಯಾಯ, ಜಾತ್ಯತೀತತೆ, ಸೋದರತೆ, ಸಮಾನತೆ ಸಾರುವ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವವರು ನೀವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದಲಿತರನ್ನು ಹೀನಾಯವಾಗಿ ಬೈಯ್ಯುವ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಿರುವ, ಸದಾ ಮೀಸಲಾತಿಯನ್ನು ವಿರೋಧಿಸುತ್ತಾ ಹೇಳಿಕೆ ನೀಡುವ ಅನಂತಕುಮಾರ್ ಹೆಗಡೆ ನಿಮ್ಮ ಪಕ್ಷದ ಸಂಸದರಲ್ಲವೇ? ಅವರಿಗೆ ಒಮ್ಮೆಯಾದರೂ ತಾವು ಬುದ್ಧಿ ಹೇಳಿದ್ದೀರಾ ಬಿ.ಎಲ್.ಸಂತೋಷ್ ಅವರೇ? ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.

ನಿಮ್ಮ ಪಕ್ಷದಿಂದ ಎಷ್ಟು ಜನ ದಲಿತರಿಗೆ ವಿಧಾನಸಭೆ, ವಿಧಾನ ಪರಿಷತ್, ಬಿಬಿಎಂಪಿ, ಪಂಚಾಯತ್ ರಾಜ್ ಚುನಾವಣೆಗಳಲ್ಲಿ ಟಿಕೆಟ್ ನೀಡಿದ್ದೀರ ಬಿ.ಎಲ್.ಸಂತೋಷ್ ಅವರೇ? ಹೋಗಲಿ ಸಾಮಾಜಿಕ ನ್ಯಾಯದ ಪರವಾಗಿ ಒಮ್ಮೆಯಾದರೂ ಮಾತಾಡಿದ್ದೀರ? ದಲಿತರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳುವುದು ಒಳಿತು ಎಂದು ಅವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಎಂದಿಗೂ ಧರ್ಮಾಧಾರಿತ, ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ನಮ್ಮದು ಸಮಾನತೆ, ಜಾತ್ಯತೀತತೆಯಲ್ಲಿ ನಂಬಿಕೆಯಿರುವ ಪಕ್ಷ. ಕೋಮು ಗಲಭೆಗಳ ಮೂಲಕ ಮತ ಧ್ರುವೀಕರಣ ಮಾಡುವ ಬಿಜೆಪಿಗೆ ನಮ್ಮ ಪಕ್ಷವನ್ನು ಪ್ರಶ್ನಿಸುವ ನೈತಿಕತೆ ಇದೆಯೇ? ಎಂದು ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ಕಳೆದ 60 ವರ್ಷಗಳಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬುದು ಜನರ ಮನಸ್ಸಿನಲ್ಲಿದೆ. ಯಾವ ಪಕ್ಷ ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತತೆಯ ಪರವಿದೆ ಎಂಬುದು ಜನತೆಗೆ ಚೆನ್ನಾಗಿಯೇ ಗೊತ್ತು. ಬಿ.ಎಲ್.ಸಂತೋಷ್ ಅವರೇ, ನಿಮ್ಮ ಸುಳ್ಳು ಪ್ರಚಾರಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿ.ಎಲ್.ಸಂತೋಷ್ ಅವರೇ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ, ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಆಡಳಿತದಲ್ಲಿರುವ ನಿಮ್ಮ ಪಕ್ಷದ ಕೆಲಸ. ಶಾಂತಿ ಸ್ಥಾಪನೆಗಾಗಿ ನಾನು ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ಇನ್ನಾದರೂ ನಿಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಬದಿಗಿಟ್ಟು, ನಮ್ಮೊಂದಿಗೆ ನೆರವಾಗಿ ಎಂದು ಝಮೀರ್ ಅಹ್ಮದ್ ಖಾನ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News