'ಕೊರೋನ ವಾರಿಯರ್' ಆದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

Update: 2020-08-13 18:12 GMT

ಬೆಂಗಳೂರು, ಆ. 13: ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಗುರುವಾರ ರಾಜರಾಜೇಶ್ವರಿನಗರ ವಲಯದ ವಿವಿಧ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ನಡೆಸುವುದರ ಜೊತೆಗೆ ಕೋವಿಡ್ ಕಮಾಂಡಿಂಗ್ ಸೆಂಟರ್ ಗೂ ಭೇಟಿ ನೀಡಿ ಪರಿಸ್ಥಿತಿಗಳನ್ನು ಅವಲೋಕಿಸಿದರು.

ಕೋವಿಡ್-19 ಸೋಂಕು ತಗುಲಿ 14 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದ ಅವರು, ಕೇವಲ ಮೂರೇ ದಿನಕ್ಕೆ ಪುನಃ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಮೊದಲಿಗೆ ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಆಂಟಿಜನ್ ಟೆಸ್ಟ್ ಸೇರಿದಂತೆ ಎಲ್ಲ ಮಾದರಿಯ ಪರೀಕ್ಷೆಗೆ ಸಂಬಂಧಪಟ್ಟಂತೆ ಕಿಟ್‍ಗಳ ಕೊರತೆ, ವೈದ್ಯರಿದ್ದಾರೆಯೇ? ಎಲ್ಲ ವಾರ್ಡ್ ಗಳಲ್ಲಿ ಯಾವ ಮಾದರಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆಂಬ ಬಗ್ಗೆ ಮಾಹಿತಿ ಪಡೆದರು.

ಆಂಬುಲೆನ್ಸ್ ವ್ಯವಸ್ಥೆಯನ್ನೂ ಸಮರ್ಪಕವಾಗಿ ನೋಡಿಕೊಳ್ಳಬೇಕು. ಜೊತೆಗೆ ಚಾಲಕರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಸೂಚಿಸಿದ ಅವರು, ಕೊರೋನ ಪಾಸಿಟಿವ್ ಬಂದು ಯಾವುದೇ ರೋಗ ಲಕ್ಷಣಗಳು ಇಲ್ಲದಿರುವವರಿಗೆ ಮನೆಯಲ್ಲೇ ಪ್ರತ್ಯೇಕ ಅಥವಾ ಕೋವಿಡ್ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಜ್ಞಾನಭಾರತಿ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಬಿಬಿಎಂಪಿ ವಾರ್ಡ್ ವಾರು ಸೇರಿದಂತೆ ಯಾವ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಹಾಗೂ ಬೇರೆ ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ವಲಯದ ಜಂಟಿ ಆಯುಕ್ತ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಶಿವಣ್ಣ, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಸೇರಿದಂತೆ ಹಾಸಿಗೆ ವ್ಯವಸ್ಥೆ ನಿರ್ವಹಣೆ, ವೈದ್ಯಕೀಯ ಕಿಟ್‍ಗಳ ನಿರ್ವಹಣೆ, ಆಹಾರ ವಿಭಾಗ ನಿರ್ವಹಣೆ, ಹೋಂ ಕ್ವಾರಂಟೇನ್ ನೋಡಲ್ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News