ನೀವು ಓಲೈಸಿದ ಎಸ್ಡಿಪಿಐ ಈಗ ನಿಮಗೆ ಮುಳ್ಳಾಗಿರುವುದು ವಿಷಾದಕರ: ಸಿದ್ದರಾಮಯ್ಯರಿಗೆ ಕಟೀಲ್ ತಿರುಗೇಟು
Update: 2020-08-14 16:40 GMT
ಬೆಂಗಳೂರು, ಆ.14: ಸಿದ್ದರಾಮಯ್ಯನವರೇ, ನೀವು ಓಲೈಸಿದ ಎಸ್ಡಿಪಿಐ ಈಗ ನಿಮಗೆ ಮುಳ್ಳಾಗಿರುವುದು ವಿಷಾದಕರ. ಅದರಲ್ಲಿಯೂ, ದಲಿತರ ಪರವಾಗಿ ನಿಲ್ಲದೆ ನೀವು ನಮ್ಮ ನೆಲದ ಕಾನೂನನ್ನು ಗೌರವಿಸದೆ ಇರುವವರ ಪರ ನಿಲ್ಲುತ್ತಿರುವುದನ್ನು ನೋಡಿದರೆ ನಿಮ್ಮ ‘ಅಹಿಂದ’ ಸಿದ್ಧಾಂತ ದಲಿತ-ವಿರೋಧಿ ಎಂಬುದು ಸಾಬೀತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ, ದಲಿತರನ್ನು ಹಿಂದೂ ಧರ್ಮದಿಂದ ದೂರವಿಡಲು ವ್ಯವಸ್ಥಿತವಾಗಿ ಸಂಚು ರೂಪಿಸುತ್ತಾ ಬಂದವರು ನೀವಲ್ಲವೇ? ನಿಮ್ಮ ಅಧಿಕಾರಾವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರಿಗೆ ರಕ್ಷಣೆ ನೀಡಿದವರಲ್ಲವೇ ನೀವು? ಪ್ರತಿ ಬಾರಿಯೂ ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಹಿಂದನಿಂದ ತಮಾಷೆ ನೋಡುತ್ತಿದ್ದವರು ನೀವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.