​ತಲಕಾವೇರಿ ದುರಂತ: ಮೂರನೇ ಮೃತದೇಹ ಪತ್ತೆ

Update: 2020-08-15 13:09 GMT

ಮಡಿಕೇರಿ ಆ.15 : ಕಾವೇರಿಯ ಕ್ಷೇತ್ರ ತಲಕಾವೇರಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದ ಭೀಕರ ಘಟನೆ ನಡೆದು ಹತ್ತು ದಿನಗಳು ಕಳೆಯುತ್ತಿರುವ ಹಂತದಲ್ಲಿ, ಕೆಸರು ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದ ಸಹಾಯಕ ಅರ್ಚಕ ರವಿ ಕಿರಣ್ ಅವರ ಮೃತದೇಹ ಪತ್ತೆಯಾಗಿದೆ.

ಜಿಲ್ಲಾ ಪ್ರಕೃತಿ ವಿಕೋಪ ತಂಡ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅರಣ್ಯ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖಾ ತಂಡಗಳ ವ್ಯಾಪಕ ಕಾರ್ಯಾಚರಣೆಯ ಫಲವಾಗಿ ದಿ.ನಾರಾಯಣ ಆಚಾರ್ ಅವರ ಮನೆಯಲ್ಲಿದ್ದ ಸಹಾಯಕ ಅರ್ಚಕ ರವಿ ಕಿರಣ್ ಅವರ ಮೃತದೇಹ ಘಟನಾ ಸ್ಥಳದಿಂದ ಅಂದಾಜು ಎರಡು ಕಿ.ಮೀ. ದೂರದ ಕಡಿದಾದ ಪ್ರದೆಶದಲ್ಲಿ ಇದ್ದುದನ್ನು ಪತ್ತೆ ಹಚ್ಚಿ, ಹೊರ ತೆಗೆಯಲಾಗಿದೆ.

ಇದರೊಂದಿಗೆ ಗುಡ್ಡ ಕುಸಿತದಿಂದ ಕಾಣೆಯಾದ ಐವರ  ಪೈಕಿ 3 ಜನರ ಮೃತದೇಹಗಳು ಪತ್ತೆಯಾದಂತಾಗಿದೆ. ದಿ. ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಆಚಾರ್ ಮತ್ತು ಸಹಾಯಕ ಅರ್ಚಕ ಶ್ರೀನಿವಾಸ್ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿಯಾಗಿರುವ ರವಿಕಿರಣ್ ಅವರು ಕಾಸರಗೋಡು ಜಿಲ್ಲೆಯ ಅಡೂರು ಕಾಯರ್ತಿಮೂಲೆ ನಿವಾಸಿ ಶ್ರೀನಿವಾಸ ಪಡ್ಡಿಲ್ಲಾಯ ಅವರೊಂದಿಗೆ ನಾರಾಯಣ ಆಚಾರ್ ಅವರ ಮನೆಯಲ್ಲಿದ್ದುಕೊಂಡು,  ಕ್ಷೇತ್ರದ ಪೂಜಾ ಕಾರ್ಯಗಳಿಗೆ ಅವರಿಗೆ ನೆರವನ್ನು ನೀಡುತ್ತಿದ್ದರು. ಇವರೆಲ್ಲರೂ ಆ.5ರ ಭೂ ಕುಸಿತಕ್ಕೆ ಸಿಲುಕಿ ಭೂ ಸಮಾಧಿಯಾಗಿದ್ದರು.

ಕಾರ್ಯಾಚರಣೆ ಮುಂದುವರಿಯಲಿದೆ: ಸಚಿವ ವಿ. ಸೋಮಣ್ಣ ಮಾತನಾಡಿ, ಕಾರ್ಯಾಚಾರಣೆಯನ್ನು ಮುಂದುವರಿಸುತ್ತೇವೆ. ಇನ್ನೂ ಎರಡು ಮೃತದೇಹಗಳು ಸಿಗಬೇಕಾಗಿದ್ದು, ಅವುಗಳ ಪತ್ತೆಯಾಗುವ ವಿಶ್ವಾಸವಿದೆ. ಕಾರ್ಯಾಚರಣೆ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆಯೆಂದು ತಿಳಿಸಿದ್ದಾರೆ.

ಶನಿವಾರದ ಕಾರ್ಯಾಚರಣೆಯ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಸಂಸದ ಪ್ರತಾಪ ಸಿಂಹ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೆರಿದಂತೆ ಹಲ ಪ್ರಮುಖರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News