ವಿಜಯಪುರ: ಅಂಬೇಡ್ಕರ್‌ರನ್ನು ಅವಮಾನಿಸಿದ ಆರೋಪ; ಶಿಕ್ಷಕ ಅಮಾನತು

Update: 2020-08-16 06:08 GMT
ಮೊಕಾಶಿ

ವಿಜಯಪುರ, ಆ.16: ಭಾರತೀಯ ಸಂವಿಧಾನದ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಅವರಿ‌ಗೆ ಅವಮಾನಿಸಿದ ಆರೋಪದಲ್ಲಿ ಸಿಂಧಗಿ ತಾಲೂಕಿನ ಮಡ್ನಾಲ್ ಗ್ರಾಮದ ಕೆ.ಬಿ.ಎಸ್. ಶಾಲೆಯ ಶಿಕ್ಷಕ ಎಸ್.ಎಸ್. ಮೊಕಾಶಿಯನ್ನು ಅಮಾನತು ಮಾಡಲಾಗಿದೆ.

ಶನಿವಾರ ಶಾಲೆಯಲ್ಲಿ ನಡೆದ 74ನೇ ಸ್ವಾತಂತ್ರೋತ್ಸವ ದಿನಾಚರಣೆ ವೇಳೆ ಅಂಬೇಡ್ಕರ್ ಭಾವಚಿತ್ರವನ್ನು ಇಡುವ ವಿಚಾರದಲ್ಲಿ ಗ್ರಾಮಸ್ಥ ರೊಂದಿಗೆ ಶಿಕ್ಷಕ ವಾಗ್ವಾದ ನಡೆಸುತ್ತಿರುವ ವೀಡಿಯೊವೊಂದು ವೈರಲ್ ಆದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಂಬೇಡ್ಕರ್‌ರವರು ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಸ್ವಾತಂತ್ರ ದಿನದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರ ಇಡುವ ಅಗತ್ಯವಿಲ್ಲ ಎಂದು ಶಿಕ್ಷಕ ಹೇಳುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ.

ನಾವು ನಮ್ಮ ಮಕ್ಕಳಿಗೆ ತಪ್ಪು ಮಾಹಿತಿಯನ್ನು ನೀಡಬಾರದು. ಅಂಬೇಡ್ಕರ್‌ರವರು ಸ್ವಾತಂತ್ರ ಹೋರಾಟಗಾರರಲ್ಲ. ಹೀಗಾಗಿ ನಾನು ಅಂಬೇಡ್ಕರ್ ಭಾವಚಿತ್ರ ಇಟ್ಟಿಲ್ಲ ಎಂದು ಅಂಬೇಡ್ಕರ್ ಫೋಟೊವನ್ನು ಏಕೆ ಇಟ್ಟಿಲ್ಲ ಎಂಬ ಗ್ರಾಮಸ್ಥರ ಪ್ರಶ್ನೆಗೆ ಶಿಕ್ಷಕ ಉತ್ತರಿಸಿದ್ದಾನೆ.
ಈ ವೇಳೆ ಇತರ ಶಿಕ್ಷಕರು ಕೂಡಾ ಮೊಕಾಶಿಗೆ ಬೆಂಬಲಿಸುತ್ತಿರುವುದು ಕಂಡುಬಂತು. ವೀಡಿಯೊ ವೈರಲ್ ಆದ ಬಳಿಕ ಶಿಕ್ಷಕನನ್ನು ಅಮಾನತಗೊಳಿಸಿ ಶಿಕ್ಷಣ ಇಲಾಖೆ ತ್ವರಿತವಾಗಿ ಕ್ರಮಕೈಗೊಂಡಿದೆ.

ಅಂಬೇಡ್ಕರ್ ಅವರಂತಹ ಶ್ರೇಷ್ಠ ವ್ಯಕ್ತಿತ್ವಕ್ಕೆ ಅಗೌರವ ತೋರಲಾಗಿದೆ. ಇದು ಶಿಕ್ಷಕನ ಕರ್ತವ್ಯ ಲೋಪವಾಗಿದೆ. ಇದನ್ನು ಪರಿಗಣಿಸಿ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News