ಜಮೀನು ವಿವಾದದ ಜಗಳ: ಐವರಿಂದ ಆತ್ಮಹತ್ಯೆಗೆ ಯತ್ನ; ಮಹಿಳೆ ಸಾವು

Update: 2020-08-18 16:54 GMT

ಮಂಡ್ಯ, ಆ.18: ಜಮೀನು ವಿವಾದ ಹಿನ್ನಲೆಯಲ್ಲಿ ದಾಯಾದಿ ಕುಟುಂಬಗಳ ನಡುವಿನ ಜಗಳ ತಾರಕಕ್ಕೇರಿ 5 ಮಂದಿ ಕ್ರಿಮಿನಾಶಕ ಸೇವಿಸಿದ್ದು, ಅವರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಗ್ರಾಮದ ನಾರಾಯಣ ಪತ್ನಿ ಶೈಲಜಾ ಅಲಿಯಾಸ್ ಲಕ್ಷ್ಮಮ್ಮ(35) ಸಾವನ್ನಪ್ಪಿದ್ದು, ನಾಥಪ್ಪ ಅವರ ಪತ್ನಿ ತಿಮ್ಮಮ್ಮ(45) ತೀವ್ರ ಅಸ್ವಸ್ಥರಾಗಿದ್ದು, ಮಂಡ್ಯದ ಖಾಸಗಿ ನರ್ಸಿಂಗ್‍ ಹೋಂನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಶ್ರೀನಿವಾಸ್ ಕುಟುಂಬದ ಜಯಮ್ಮ(62), ಸಿದ್ದೇಶ್(41) ಹಾಗೂ ಶಿವಲಿಂಗಮ್ಮ(65) ಅವರೂ ಸೀಮೆಎಣ್ಣೆ ಕುಡಿದು ಅಸ್ವಸ್ಥರಾಗಿದ್ದು, ಮದ್ದೂರಿನ ಕೆ.ಗುರುಶಾಂತಪ್ಪ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋದರ ಸಂಬಂಧಿಗಳಾದ ನಾರಾಯಣ ಮತ್ತು ಶ್ರೀನಿವಾಸ್ ಕುಟುಂದವರ ಸೋದರ ನಡುವೆ ಆಸ್ತಿವಿಚಾರದಲ್ಲಿ ಮನಸ್ತಾಪವಿದ್ದು, 15 ದಿನಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡಿ ಹಿರಿಯರು ತೀರ್ಮಾನ ನೀಡಿದ್ದರು ಎನ್ನಲಾಗಿದೆ.

ಪಂಚಾಯಿತಿ ತೀರ್ಮಾನಕ್ಕೆ ಒಪ್ಪದೆ ಮತ್ತೆ ಮಂಗಳವಾರ ಬೆಳಗ್ಗೆ ಜಗಳ ಆರಂಭವಾಗಿದೆ. ಈ ವೇಳೆ ಲಕ್ಷ್ಮಮ್ಮ ಮತ್ತು ತಿಮ್ಮಮ್ಮ ಕೀಟನಾಶಕ ವಿಷ ಸೇವನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಜಯಮ್ಮ, ಸಿದ್ದೇಶ್ ಹಾಗೂ ಶಿವಲಿಂಗಮ್ಮ ಸೀಮೆ ಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮಕ್ಕೆ ಸಿಪಿಐ ಕೆ.ಆರ್.ಪ್ರಸಾದ್, ಸಬ್‍ಇನ್ಸ್ ಪೆಕ್ಟರ್ ಮಂಜೇಗೌಡ ಭೇಟಿ ನೀಡಿ ಪರಿಶೀಲಿಸಿದ್ದು, ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News