ಆಕ್ಸಿಜನ್ ಕೊರತೆಯಿಂದ ಜೀವ ಹೋದರೆ ಸರಕಾರವೇ ಹೊಣೆ: ಎಚ್.ಕೆ.ಪಾಟೀಲ್ ಎಚ್ಚರಿಕೆ

Update: 2020-08-19 16:06 GMT

ಬೆಂಗಳೂರು, ಆ. 19: `ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ದಿನೇ ದಿನೇ ಗಂಭೀರವಾಗುತ್ತಿದೆ. ಸರಕಾರದ ಅವ್ಯವಸ್ಥೆ, ಸಮಯೋಚಿತ ನಿರ್ಣಯಗಳ ಕೊರತೆ ಹಾಗೂ ಮುಂದಾಲೋಚನೆ ಇಲ್ಲದ ಕ್ರಮಗಳಿಂದ ಜನರು ತೊಂದರೆಗೆ ಸಿಲುಕಿದ್ದಾರೆ. ಆಂಬ್ಯುಲೆನ್ಸ್, ಹಾಸಿಗೆ, ಸಿಬ್ಬಂದಿ ಕೊರತೆ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಾದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದೀಗ ಆಕ್ಸಿಜನ್ ಸಮಸ್ಯೆ ಸೃಷ್ಟಿಯಾಗಿದೆ' ಎಂದು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುಜರಾತ್‍ನ ಮೆಹತಾ ಕಂಪೆನಿಗೆ ಆಕ್ಸಿಜನ್ ಪೂರೈಕೆ ಟೆಂಡರ್ ಗುತ್ತಿಗೆ ಕೊಟ್ಟು ತೊಂದರೆ ಮಾಡಿಕೊಂಡರು. ಆ ಕಂಪೆನಿಯಿಂದ ಇನ್ನೂ ಆಕ್ಸಿಜನ್ ಬಂದಿಲ್ಲ. ದೂರದೃಷ್ಟಿಯಿಂದ ಸರಕಾರ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. ರಾಜ್ಯದಲ್ಲಿ 24,500 ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದೆ ಎಂದು ಹೇಳಿದರು.

ಇದರಲ್ಲಿ ಒಂದು ಸಾವಿರ ಜನರಿಗೆ ಆಕ್ಸಿಜನ್ ಕೊಡಲೇಬೇಕಾದ ಅತ್ಯಂತ ಅನಿವಾರ್ಯ ಸ್ಥಿತಿ ಇದೆ. ಆದರೆ ಸರಕಾರ ಕೇವಲ 12 ಸಾವಿರ ಆಕ್ಸಿಜನ್ ಬೆಡ್ ಸಿದ್ದಪಡಿಸಿದೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇದೆ. ಕೊರೋನ ಸೋಂಕು ಬಂದು ನಾಲ್ಕು ತಿಂಗಳು ಕಳೆಯಿತು. ಲಾಕ್‍ಡೌನ್ ನಂತರವೂ ಸರಕಾರ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. ಆಕ್ಸಿಜನ್ ವ್ಯವಸ್ಥೆಗೆಂದೇ ಸರಕಾರ ಒಂದು ಟಾಸ್ಕ್ ಫೋರ್ಸ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

80 ಕಿಲೋಮೀಟರ್ ಹಾಗೂ 100 ಕಿಲೋ ಮೀಟರ್ ಮೇಲೆ ಅದನ್ನು ಟ್ರಾನ್ಸ್ ಪೋರ್ಟ್ ಮಾಡಲಾಗದು ಎಂಬ ತಾಂತ್ರಿಕ ಕಾರಣವನ್ನು ಸರಕಾರ ಕೊಡಬಹುದು. ಆದರೆ, ಅಂತಹ ಸಂದರ್ಭದಲ್ಲಿ ವಿಮಾನ, ಹೆಲಿಕಾಪ್ಟರ್‍ಗಳ ಬಳಸಿಕೊಳ್ಳಲಿ. ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೋನ ರೋಗಿಗಳ ಜೀವಕ್ಕೇ ಆಪತ್ತು ತಂದಿದೆ. ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಜೀವ ಹೋದರೂ ಸರಕಾರವೇ ಹೊಣೆ ಎಂದು ಅವರು ಎಚ್ಚರಿಕೆ ನೀಡಿದರು.

ಸೈಕಲ್‍ನಲ್ಲಿ ಶವ ತೆಗೆದುಕೊಂಡು ಹೋಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ. ರಾಜ್ಯ ಸರಕಾರ ಇನ್ನೂ ಕೊರೋನ ಸೋಂಕಿತರ ಚಿಕಿತ್ಸೆಗೆ ಹಾಗೂ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಸರಿಯಲ್ಲ ಎಂದ ಅವರು, ಕೊರೋನ ನಿಯಂತ್ರಣಕ್ಕೆ ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಪಾಟೀಲ್ ಇದೇ ವೇಳೆ ಆಗ್ರಹಿಸಿದರು.

ಮಾನವ ಹಕ್ಕುಗಳ ಆಯೋಗದ ಮೂರನೇ ವಿಚಾರಣೆಗೆ ನಾನು ನಿನ್ನೆ ಹಾಜರಾಗಿದ್ದೆ. ಬೆಂಗಳೂರು ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿನ ಕೋವಿಡ್ ಸೆಂಟರ್‍ನಲ್ಲಿ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 15 ಮಂದಿ ರೋಗಿಗಳಿಗೆ ಒಂದು ಶೌಚಾಲಯ ವ್ಯವಸ್ಥೆ ಮಾಡಿದ್ದಾರೆ. ಇದು ಸರಕಾರದ ಅತ್ಯಂತ ನಾಚಿಕೆಗೇಡಿನ ಸ್ಥಿತಿ ಎಂದು ಪಾಟೀಲ್ ಇದೇ ವೇಳೆ ವಾಗ್ದಾಳಿ ನಡೆಸಿದರು.

ಕರಾಳ ಅಧ್ಯಾದೇಶ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಅಧ್ಯಾದೇಶ ರೈತ ವಿರೋಧಿ ಮತ್ತು ಅತ್ಯಂತ ಕರಾಳ ಶಾಸನ, ಇದು ರೈತರಿಗೆ ಮಾರಕ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ಭೂಮಿ ಮಾರಾಟಕ್ಕೆ ಕಾನೂನು ತಂದಿರುವುದು ಮಾರಕ. ಕೊರೋನಾ ನಿಯಂತ್ರಣ ಹಾಗೂ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗದ ಸರಕಾರಕ್ಕೆ ಈ ಅಧ್ಯಾದೇಶ ಜಾರಿಗೆ ಮಾತ್ರ ಇಷ್ಟೊಂದು ಅವಸರ ಏಕೆ? ಭೂಮಿ ಖರೀದಿ ಮಾಡಿದಾಗ ರೈತರು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿದ್ದರೂ ಇಂದು ಕೋಟಿ ಕೋಟಿ ಬೆಲೆ ಇದೆ. ಹೀಗಾಗಿ ರೈತರ ಭೂಮಿ ಇಂದಿನ ಬೆಲೆಗೆ ಖರೀದಿ ಆಗಬೇಕು. ಇಂದಿನ ಭೂಮಿಯ ಬೆಲೆ ರೈತರಿಗೆ ಸಿಗಬೇಕು. ಅಧಿವೇಶನದಲ್ಲಿ ಚರ್ಚೆ ಆಗದೇ ಅಧ್ಯಾದೇಶ ಜಾರಿ ಸರಿಯಲ್ಲ ಎಂದರು.
ತೆರಿಗೆ ಸಂಗ್ರಹದಲ್ಲಿ ಕೊರತೆ: ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ. ತೆರಿಗೆ ಸಂಗ್ರಹ ಕೊರತೆ ಬಗ್ಗೆ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಪಾಟೀಲ್ ತಿಳಿಸಿದರು.

'ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಪ್ರಾರಂಭವಾಗಿದೆ. ಮಲಪ್ರಭದಲ್ಲಿ 25 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಇವತ್ತಿನ ಮಳೆ ಪ್ರಮಾಣ ನೋಡಿದರೆ ಪ್ರವಾಹದ ಭೀತಿ ತೀವ್ರವಾಗಿದೆ. ಕಳೆದ ವರ್ಷ ಸರಕಾರ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಬೋಟ್ ವ್ಯವಸ್ಥೆ, ಪುನರ್ ವಸತಿ ವ್ಯವಸ್ಥೆಯನ್ನು ಸರಕಾರ ಮಾಡಿರಲಿಲ್ಲ. ಈ ವರ್ಷ ಹಾಗಾಗಬಾರದು, ಸರಕಾರ ಸೂಕ್ತ ಮುಂಜಾಗ್ರತೆ ವಹಿಸಬೇಕು.'
-ಎಚ್.ಕೆ.ಪಾಟೀಲ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News