ವ್ಯವಸ್ಥಿತವಾಗಿ ಎಸ್ಡಿಪಿಐ ರಕ್ಷಣೆ ಮಾಡಲು ಸಿದ್ದರಾಮಯ್ಯ ಪ್ಲ್ಯಾನ್: ಸಂಸದ ಪ್ರತಾಪ್ ಸಿಂಹ ಆರೋಪ
ಮೈಸೂರು,ಆ.20: ಮಾಜಿ ಸಿಎಂ ಸಿದ್ದರಾಮಯ್ಯ ಎಸ್ಡಿಪಿಐಯನ್ನು ಛೂ ಬಿಟ್ಟು ದಲಿತರ ಮೇಲೆ ದೌರ್ಜನ್ಯ ಮಾಡಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.
ಮೈಸೂರಿನಲ್ಲಿ ಗುರುವಾರ ಎಸ್ ಡಿಪಿಐ ಸಂಘಟನೆ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋವಾಗುತ್ತಿರುವುದು ಆಶ್ಚರ್ಯ ತಂದಿದೆ. 30 ವರ್ಷದ ಗಲಾಟೆ ಬಗ್ಗೆ ಸಿದ್ದು ಪ್ರಸ್ತಾಪ ಮಾಡಿದ್ದಾರೆ. ವ್ಯವಸ್ಥಿತವಾಗಿ ಎಸ್ಡಿಪಿಐ ರಕ್ಷಣೆ ಮಾಡಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ದಲಿತರನ್ನು ಮಟ್ಟ ಹಾಕುವ ಕೆಲಸ ಮಾಡಿದರು. ಹೀಗೆ ದಲಿತರಿಗೆ ನಿರಂತರವಾಗಿ ಒಳ ಏಟು ಹಾಕಿದರು. ಪರಮೇಶ್ವರ್ ಅವರಿಗೆ ಡಿಸಿಎಂ ತಪ್ಪಿಸಿದ್ದು ಸಿದ್ದರಾಮಯ್ಯ. ಶ್ರೀನಿವಾಸಪ್ರಸಾದ್ ರನ್ನು ತುಳಿದಿದ್ದು ಸಿದ್ದರಾಮಯ್ಯ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪರನ್ನು ಸೋಲಿಸಿದ್ದು ಯಾರು..? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಝಮೀರ್ ಅಹ್ಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ
ಇದೇ ವೇಳೆ ಶಾಸಕ ಝಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ, ಗಲಾಟೆ ನಡೆದೆಲ್ಲೆಲ್ಲ ಝಮೀರ್ ಏಕೆ ಹಾಜರಾಗುತ್ತಾರೆ? ಝಮೀರ್ ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಝಮೀರ್ ಅಹ್ಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಅಖಂಡ ಶ್ರೀನಿವಾಸ್ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ. ಪುಂಡ ಮುಸಲ್ಮಾನರ ಹೆಸರು ಹೇಳದಂತೆ ಒತ್ತಡ ಹಾಕಲಾಗುತ್ತಿದೆ. ರಾಜ್ಯದಲ್ಲಿ ಸ್ಲೀಪರ್ ಸೇಲ್ ಆಕ್ಟೀವ್ ಆಗಿದೆ. ಕೇರಳ ಮಾದರಿಯ ರಾಜಕೀಯ ಹತ್ಯೆ ಎಸ್ಡಿಪಿಐ ಮೂಲಕ ರಾಜ್ಯಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ನವರು ಇದನ್ನು ಮಟ್ಟ ಹಾಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದರು.