ಸಿಇಟಿಯಲ್ಲಿ ಮಡಿಕೇರಿಯ ಆರ್ನವ್ ಅಯ್ಯಪ್ಪ ಅಮೋಘ ಸಾಧನೆ
ಮಡಿಕೇರಿ, ಆ.21: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಕೊಡಗಿನ ಪಾಸುರ ಆರ್ನವ್ ಅಯ್ಯಪ್ಪ ಯೋಗ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಹಾಗೂ ವಿವಿಧ ವಿಭಾಗಗಳಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ಆರ್ನವ್ ಅಯ್ಯಪ್ಪ ಅವರು ಸಿಇಟಿಯ ಬಿ.ಎಸ್ಸಿ. ಅಗ್ರಿಕಲ್ಚರ್ ನಲ್ಲಿ 4 ನೇ ರ್ಯಾಂಕ್, ವೆಟರ್ನರಿಯಲ್ಲಿ 5 ನೇ ರ್ಯಾಂಕ್, ಬಿ.ಫಾರ್ಮದಲ್ಲಿ 7 ಮತ್ತು ಡಿ ಫಾರ್ಮದಲ್ಲಿ 7ನೇ ರ್ಯಾಂಕ್ ಹಾಗೂ ಇಂಜಿನಿಯರಿಂಗ್ನಲ್ಲಿ 81ನೇ ರ್ಯಾಂಕ್ ಪಡೆದಿದ್ದಾರೆ.
ಮೂಡಬಿದ್ರೆಯ ಆಳ್ವಾಸ್ನಲ್ಲಿ ಶಿಕ್ಷಣ ಪಡೆದಿರುವ ಇವರು, ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 580 ಅಂಕ (ಶೇ.99.75) ಅಂಕಗಳನ್ನು ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಇವರು ಮಡಿಕೇರಿಯ ನ್ಯಾಯವಾದಿಗಳಾದ ಪಾಸುರ ಪ್ರೀತಂ ಮತ್ತು ಹೇಮಾ ದಂಪತಿಗಳ ಪುತ್ರರಾಗಿದ್ದಾರೆ.
ನನ್ನ ಸಾಧನೆಗೆ ತಂದೆ, ತಾಯಿಗಳ ಬೆಂಬಲ ಮತ್ತು ಶಿಕ್ಷಕ ವೃಂದದ ಪ್ರೋತ್ಸಾಹವೇ ಕಾರಣ. ಕೋವಿಡ್ ರಜೆ ದಿನಗಳನ್ನು ಪರೀಕ್ಷೆಗಾಗಿ ಉತ್ತಮ ರೀತಿಯಲ್ಲಿ ಬಳಸಿಕೊಂಡೆ. ಪಠ್ಯ ಪುಸ್ತಕಗಳಲ್ಲಿ ಇರುವುದಷ್ಟೇ ಅಲ್ಲದೆ ಇತರ ವಿಷಯಗಳ ಬಗ್ಗೆಯೂ ತಿಳಿದುಕೊಂಡೆ. ತರಗತಿಗಳು ನಡೆಯುತ್ತಿದ್ದಾಗ ಬೆಳಗ್ಗೆ ಮತ್ತು ರಾತ್ರಿ ಮಾಮೂಲಿನಂತೆ ಓದುತ್ತಿದ್ದೆ.
-ಆರ್ನವ್ ಅಯ್ಯಪ್ಪ
ಪುತ್ರನ ಸಾಧನೆ ಹೆಮ್ಮೆ ತಂದಿದೆ, ಆರ್ನವ್ ಹೆಚ್ಚು ಆಸಕ್ತಿಯಿಂದ ಓದುತ್ತಿದ್ದ. ಮುಂದೆ ನೀಟ್ ಪರೀಕ್ಷೆಯನ್ನು ಎದುರಿಸಬೇಕಾಗಿದ್ದು, ಇದರಲ್ಲೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ. ನಿತ್ಯ ಕಲಿಕೆಯಲ್ಲಿ ತೊಡಗಿದ್ದಾನೆ.
-ಪಿ.ಯು.ಪ್ರೀತಂ, ಹೇಮಾ ಪ್ರೀತಂ (ತಂದೆ, ತಾಯಿ)