ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ: ಪ್ರಧಾನಿ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ

Update: 2020-08-27 12:47 GMT

ಬೆಂಗಳೂರು, ಆ.27: ರಾಜ್ಯ ಸರಕಾರವು ರೈತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಈ ಕೂಡಲೇ ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ನಿರ್ದೇಶನ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಣ್ಣ ರೈತರು ಬೀದಿಗೆ ಬರಲಿದ್ದಾರೆ. ಅಧಿಕಾರಶಾಹಿ, ಬಂಡವಾಳಶಾಹಿಗಳೇ ಕೃಷಿ ಜಮೀನುಗಳನ್ನು ಕೊಳ್ಳಲು ಸಾಧ್ಯ. ಈಗಾಗಲೇ ಕೆಐಎಡಿಬಿ ಬಳಿ 36,000 ಎಕರೆ ಬಳಕೆಯಾಗದ ಜಮೀನಿದೆ. ಅದನ್ನೇ ಕೈಗಾರಿಕೆಗಳಿಗೆ ಬಳಸಿಕೊಂಡು ಕೃಷಿ ಜಮೀನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೇಶದಲ್ಲಿ ಕೃಷಿಯು ಅತಿದೊಡ್ಡ ಜೀವನೋಪಾಯವಾಗಿದೆ. ಅಲ್ಲದೆ, ಕೃಷಿ ಭೂಮಿಯು ಉತ್ಪಾದನೆಯ ಮುಖ್ಯ ಅಂಶವಾಗಿದೆ. ಕೃಷಿ ಭೂಮಿ ಗ್ರಾಮೀಣ ಜೀವನೋಪಾಯದ ಆಂತರಿಕ ಭಾಗವಾಗಿದೆ. ಅದಕ್ಕೆ ಭಾವನಾತ್ಮಕ ಮೌಲ್ಯವಿದೆ. ಕೃಷಿ ಸಮುದಾಯಗಳನ್ನು ಸಬಲೀಕರಣಗೊಳಿಸುವ ಸುರಕ್ಷತೆಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವು ಭಾರತದ ಬೆಳವಣಿಗೆಗೆ ತಡೆಯೊಡ್ಡುತ್ತದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು, ರಾಜ್ಯದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಭೂ ಸುಧಾರಣಾ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ತಂದಿದೆ. ರಾಜ್ಯದಲ್ಲಿ ರೈತರ ಹಕ್ಕುಗಳನ್ನು ದುರ್ಬಲಗೊಳಿಸುವ ಇಂತಹ ಒಂದು ಪ್ರಯತ್ನ ನಡೆಯುತ್ತಿದೆ. ಇದನ್ನು ತಡೆಯಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯ ಸರಕಾರದ ಈ ನಿರ್ಧಾರ ಕೃಷಿ ಸಮುದಾಯ ಮತ್ತು ರಾಜಕೀಯ ಆರ್ಥಿಕತೆಯ ಮೇಲೆ ಬಹುಮುಖಿ ಪರಿಣಾಮ ಬೀರುತ್ತದೆ. ಶ್ರೀಮಂತರು ಭೂಮಿಯನ್ನು ಹೊಂದುವ ಯುಗವನ್ನು ಸುಗಮಗೊಳಿಸಿದಂತಾಗಿದೆ. 1961 ಮತ್ತು 1974 ರ ಭೂ ಸುಧಾರಣೆಗಳು ದುರ್ಬಲ ವರ್ಗಗಳಾದ ದಲಿತರು ಮತ್ತು ಇತರ ಹಿಂದುಳಿದ ಜನರಿಗೆ ಭೂಮಿಯ ಮಾಲಕರಾಗಲು ಅನುವು ಮಾಡಿಕೊಟ್ಟವು. ಇದು ಬಡತನ ಮತ್ತು ಬಂಧಿತ ಕಾರ್ಮಿಕರ ಸಂಕೋಲೆಗಳನ್ನು ಮುರಿದು ಲಕ್ಷಾಂತರ ರೈತರನ್ನು ಮುಕ್ತಗೊಳಿಸಿತು ಎಂದು ಅವರು ಸ್ಮರಿಸಿದ್ದಾರೆ.

ಸಾಮಾಜಿಕ ಸ್ಥಾನಮಾನವನ್ನು ನೀಡಿತು ಮತ್ತು ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಅನ್ಯಾಯಗಳ ವಿರುದ್ಧ ಹೋರಾಡುವ ವಿಶ್ವಾಸವನ್ನು ನೀಡಿತು. ಆದರೆ, ಈ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯೊಂದಿಗೆ, ಶ್ರೀಮಂತ ಮತ್ತು ಶಕ್ತಿಶಾಲಿ ಜನರ ಕೈಯಲ್ಲಿ ರೈತರು ದುರ್ಬಲರಾಗುವಂತೆ ಮಾಡಿದೆ. ಸರಕಾರ ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರ ಮತ್ತು ಕೃಷಿ ಕ್ಷೇತ್ರಕ್ಕೆ ಹೂಡಿಕೆ ಮಾಡುವುದು ತಿದ್ದುಪಡಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಜನ ಹಿಂದುಳಿಯಲು ಜಮೀನ್ದಾರಿ ಪದ್ಧತಿ ಪ್ರಮುಖ ಕಾರಣ. ಭೂ ಸುಧಾರಣಾ ಕಾಯ್ದೆಗೆ ತರುತ್ತಿರುವ ತಿದ್ದುಪಡಿಯು ಬೆಂಗಳೂರು ಲ್ಯಾಂಡ್ ಮಾಫಿಯಾಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ರೈತರಿಂದ ಹೆಚ್ಚಿನ ಜಮೀನು ಪಡೆದು ರಿಯಲ್ ಎಸ್ಟೇಟ್‍ಗೆ ಬಳಕೆ ಮಾಡಿಕೊಳ್ಳಲಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜ್ಯ ಸರಕಾರವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಂದುವರೆಯುವುದು ಸರಿಯಲ್ಲ. ಈ ತಿದ್ದುಪಡಿಯು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರಲಿದೆ. ಇದನ್ನು ಜಾರಿಗೊಳಿಸುವ ಮುನ್ನ ವಿಧಾನಸಭೆಯಲ್ಲಿ ಚರ್ಚೆ ನಡೆಸಬೇಕಿದೆ. ಲಕ್ಷಾಂತರ ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಈ ತಿದ್ದುಪಡಿಯನ್ನು ಜಾರಿಗೊಳಿಸುವುದನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡುವಂತೆ ಪ್ರಧಾನಿಗೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News