ಚಾಮರಾಜನಗರ: ಹತ್ತು ದಿನಗಳಿಂದ ಚರ್ಚ್ ಫಾದರ್ ನಿಗೂಢ ನಾಪತ್ತೆ

Update: 2020-08-27 17:38 GMT

ಚಾಮರಾಜನಗರ, ಆ.27: ಕಳೆದ ಹತ್ತು ದಿನಗಳಿಂದ ಚರ್ಚ್ ಫಾದರೊಬ್ಬರು ನಿಗೂಢವಾಗಿ ಕಾಣೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ.

ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಚರ್ಚ್ ನ ಫಾದರ್ ಸಂತೋಷ್ ಜೋಷಿರವರೇ ಕಳೆದ ಹತ್ತು ದಿನಗಳಿಂದ ನಿಗೂಢವಾಗಿ ಕಾಣೆಯಾದವರು ಎಂದು ಗೊತ್ತಾಗಿದೆ.

ಆಗಸ್ಟ್ 16 ರಂದು ಚರ್ಚ್ ನಲ್ಲಿ ಪಾರ್ಥನೆ ಸಲ್ಲಿಸಿದ ಬಳಿಕ ಕಾಣೆಯಾಗಿರುವ ಫಾದರ್ ಎಲ್ಲಿಗೆ ತೆರಳಿದರು ಎನ್ನುವುದು ತಿಳಿದು ಬಂದಿಲ್ಲ. ಹತ್ತು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ಇರುವ ಫಾದರ್ ಸಂತೋಷ್ ಜೋಷಿರವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಸಂತೋಷ್ ಜೋಷಿರವರು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದವರಾಗಿದ್ದು, ಅಲ್ಲೇ ಅವರ ಪೋಷಕರು ಇದ್ದಾರೆ. 

ಪೋಷಕರ ಬಳಿಗೆ ತೆರಳಿರಬೇಕೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರೂ ಸಹ, ಚರ್ಚ್ ಫಾದರ್ ಬಳಕೆ ಮಾಡಲಾಗುತ್ತಿದ್ದ ಕಾರು ಚರ್ಚ್ ಆವರಣದಲ್ಲೇ ಇರುವುದು ಹಲವಾರು ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ.

ಸಂತೋಷ್ ಜೋಷಿಯವರು ಆ.16 ರಂದು ಚರ್ಚ್ ನಲ್ಲಿ ಪಾರ್ಥನೆ ಮುಗಿಸಿ ಬೈಕ್ ನಲ್ಲಿ ಹೊರಟಿದ್ದು, ಅವರು ಬಳಕೆ ಮಾಡುತ್ತಿದ್ದ ಮೊಬೈಲ್ ಕಾಮಗೆರೆ ಬಳಿ ಸ್ವಿಚ್ ಆಫ್ ಆಗಿದೆ. ಬಳಿಕ ಅವರ ಮೊಬೈಲ್ ಟವರ್ ಸಿಗ್ನಲ್ ಹಾಸನದಲ್ಲಿ ಚಾಲನೆಯಾಗಿದ್ದು, ಅಲ್ಲಿ ವಿಚಾರಣೆ ನಡೆಸಿದಾಗ ಕೌದಳ್ಳಿ ಫಾದರ್ ಹಾಸನದ ಲಾಡ್ಜ್ ನಲ್ಲಿ ಆ.19 ರ ತನಕ ಒಬ್ಬರೇ ರೂಂ ಮಾಡಿಕೊಂಡಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಖಚಿತ ಮಾಹಿತಿಯಂತೆ ಆ.19 ರಂದೇ ಕೌದಳ್ಳಿ ಫಾದರ್ ಹೊಸದೊಂದು ಸಿಮ್ ಖರೀದಿಸಿ ಅದನ್ನು ಮೊಬೈಲ್ ನಲ್ಲಿ ಹಾಕಿಕೊಂಡು ತೆರಳಿದರು ಎನ್ನುವ ಅಂಶವನ್ನು ಫಾದರ್ ತಂಗಿದ್ದ ಲಾಡ್ಜ್ ನ ಸಿಬ್ಬಂದಿಗಳು ವಿಚಾರಣೆಗೆ ಆಗಮಿಸಿದ್ದ ರಾಮಾಪುರ ಪೊಲೀಸರಿಗೆ ತಿಳಿಸಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News