ಮಾದಕ ವಸ್ತು ಮಾರಾಟ: ಮೂವರು ಆರೋಪಿಗಳನ್ನು ಬಂಧಿಸಿದ ಕೊಡಗು ಪೊಲೀಸರು

Update: 2020-08-29 17:38 GMT

ಮಡಿಕೇರಿ, ಆ.29: ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಅತ್ಯಾಧುನಿಕ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ಜಿಲ್ಲೆಯ ಅಯ್ಯಂಗೇರಿ ಗ್ರಾಮದ ಮಜೀದ್ (ಸೂಫಿ), ಶಿಯಾಬುದ್ದೀನ್(32) ಬೆಂಗಳೂರು ಶಿವಾಜಿನಗರದ ಮುಝಮ್ಮಿಲ್ (31) ಎಂಬವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ ಅಂಪೆಟಮೈನ್ (ಎಂಡಿಎಂಎ) ಎಂಬ 300 ಗ್ರಾಂ.ನಷ್ಟು ಮಾದಕ ವಸ್ತು ಹಾಗೂ ಟಾಟಾ ಇಂಡಿಕಾ (ಕೆಎ50-9941) ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಗ್ಗೆ ಮಾಹಿತಿ ಕಲೆ ಹಾಕಿ ದಾಳಿ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಆ.28ರಂದು ಮಡಿಕೇರಿ ಗ್ರಾಮಾಂತರ ಪಿಎಸ್‍ಐ ಅವರ ನೇತೃತ್ವದ ತಂಡ ಮಾದಕ ವಸ್ತು ಸರಬರಾಜಿನ ಬಗ್ಗೆ ಮಾಹಿತಿ ಕಲೆ ಹಾಕಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭ ಟಾಟಾ ಇಂಡಿಕಾ ಕಾರನ್ನು ಮತ್ತು ಸ್ವಿಫ್ಟ್ ಕಾರನ್ನು ತಡೆದು ಪರಿಶೀಲಿಸುತ್ತಿದ್ದಾಗ ಎರಡೂ ವಾಹನಗಳಲ್ಲಿದ್ದ ಆರೋಪಿಗಳು ಓಡಿ ಹೋಗಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭ ಟಾಟಾ ಇಂಡಿಕಾ ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಮಾರುತಿ ಸ್ವಿಫ್ಟ್ ವಾಹನದಲ್ಲಿ ಓಡಿ ಹೋದ ಆರೋಪಿಗಳು ಕೂಡಾ ಮಾದಕ ವಸ್ತು ವ್ಯವಹಾರಕ್ಕೆ ತಮ್ಮೊಂದಿಗೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಮಡಿಕೇರಿ ಡಿವೈಎಸ್‍ಪಿ ದಿನೇಶ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಜಿಲ್ಲಾ ಅಪರಾಧ ಪತ್ತೆದಳದ ಹಮೀದ್, ವೆಂಕಟೇಶ್, ಯೋಗೇಶ್‍ಕುಮಾರ್, ನಿರಂಜನ್, ವಸಂತ, ಅನಿಲ್‍ಕುಮಾರ್, ಶರತ್, ಚಾಲಕ ಶಶಿಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ದಿನೇಶ್, ನಗರ ಠಾಣೆಯ ಪ್ರವೀಣ್, ಸಿ.ಡಿ.ಆರ್. ಸೆಲ್‍ನ ರಾಜೇಶ್ ಅವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News