ಬುಡಕಟ್ಟು ಸಮುದಾಯದ ಏಳಿಗೆಗೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕೇಂದ್ರದ ಮೆಚ್ಚುಗೆ

Update: 2020-09-03 16:44 GMT

ಬೆಂಗಳೂರು, ಸೆ.3: ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಕೇಂದ್ರ ಪುರಸ್ಕೃತ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಸಮರ್ಪಕವಾಗಿ ಅನುಷ್ಠಾನನಗೊಳಿಸಲಾಗುತ್ತಿದ್ದು, ಕೇಂದ್ರ ಸರಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ. ಬುಡಕಟ್ಟು ಸಮುದಾಯದ ಏಳಿಗೆಗೆ ಪೂರಕವಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಗುರುವಾರ ಕೇಂದ್ರ ಬುಡಕಟ್ಟು ಸಚಿವ ಅರ್ಜುನ್ ಮುಂಡ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ರಾಜ್ಯ ಸರಕಾರವು ಅನುಷ್ಠಾನನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಬುಡಕಟ್ಟು ಜನರು ವಾಸಿಸುವ ಅರಣ್ಯ ಪ್ರದೇಶಗಳಲ್ಲಿರುವ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಮೂಲಭೂತಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ 10 ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾರಂಭಿಸಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಸಮುದಾಯದ ಪಾಲುಗೊಳ್ಳುವಿಕೆಯೊಂದಿಗೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅನುಷ್ಠಾನನಗೊಳಿಸಲಾಗುತ್ತದೆ. ರಾಜ್ಯದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯಗಳ ಸಮುದಾಯ ಆರೋಗ್ಯ ಕೋಶದಡಿ ಬುಡಕಟ್ಟು ಆರೋಗ್ಯ ಘಟಕವನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿರುವ 10 ವೈದ್ಯಕೀಯ ಮಹಾವಿದ್ಯಾಲಯ ಅಥವಾ  ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಧರ್ಮಶಾಲೆ ಪ್ರಾರಂಭಿಸಿ, ಆದಿವಾಸಿ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗುವುದು. ಬುಡಕಟ್ಟು ಜನರ ಪರಂಪರಿಕ ವೈದ್ಯಪದ್ಧತಿಗಳನ್ನು ದಾಖಲೀಕರಣ ಮತ್ತು ಆಯ್ದ ಔಷಧಿಗಳ ತಯಾರಿಕೆಗೆ ಅಗತ್ಯ ಮೂಲಭೂತಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಗೋವಿಂದ ಕಾರಜೋಳ ಹೇಳಿದರು.

ಕಿರಿ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಕಾರ್ಯಕ್ರಮದಡಿ ಲ್ಯಾಂಪ್ಸ್ ಸಹಕಾರ ಸಂಘಗಳಿಗೆ ನೆರವು ನೀಡಲಾಗುವುದು. 19 ಪ್ರಧಾನಮಂತ್ರಿ ವನ-ಧನ ಕೇಂದ್ರ (ಪಿಎಂವಿಡಿವಿಕೆ)ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ ತಲಾ 15 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಬುಡಕಟ್ಟು ಜನರು ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧಿಸಿ ಮಾರುಕಟ್ಟೆ ಒದಗಿಸಲು ಮೈಸೂರಿನ ಸಿಎಫ್‍ಟಿಆರ್‍ಐ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ನಾನ್ ಟಿಂಬರ್ ಫಾರೆಸ್ಟ್ ಪ್ರೊಡೆಕ್ಟ್ ಕಲೆಕ್ಟರ್ ಎಂಟರ್‍ಪ್ರೈಸಸ್ ಅನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಪೂರ್ ಬಳಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿಗೊಂಡ 228 ಕುಟುಂಬಗಳ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಲು ಸಮೀಕ್ಷೆ ಕಾರ್ಯ ನಡೆಯುತ್ತಿದೆ. 2667 ಕುಟುಂಬಗಳಿಗೆ ಹೈನುಗಾರಿಕೆ, ಕುರಿ, ಮೇಕೆ, ಗೂಡ್ಸ್ ವಾಹನ ಸೇರಿದಂತೆ ಇತರ ಜೀವನೋಪಾಯ ಕಾರ್ಯಕ್ರಮಗಳಿಗೆ 21 ಕೋಟಿ ರೂ. ನೆರವು ನೀಡಲಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

ಬಿಳಿಗಿರಿ ರಂಗನ ಬೆಟ್ಟದಲ್ಲಿನ ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕು ಪತ್ರ ಪಡೆದಿರುವ 448 ಕುಟುಂಬಗಳು ಇಲಾಖೆಯ ನೆರವಿನೊಂದಿಗೆ ರೈತ ಉತ್ಪಾದನಾ ಸಂಸ್ಥೆಯನ್ನು ಸ್ಥಾಪಿಸಿ, ಕಾಫಿ ಬೋರ್ಡ್ ನ ತಾಂತ್ರಿಕ ಸಹಾಯದಿಂದ ಕಾಫಿ ಮತ್ತು ಮೆಣಸು ಬೆಳೆಗಳಿಗೆ ಪ್ರೊತ್ಸಾಹಿಸಿ ಈ ಕುಟುಂಬಗಳ ಆದಾಯವನ್ನು ಶೇ.16 ರಿಂದ ಶೇ.43 ರಷ್ಟು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರವು ಬುಡಕಟ್ಟು ಸಮುದಾಯದವರಿಗೆ ಅನುಷ್ಠಾನನಗೊಳಿಸುತ್ತಿರುವ  ಯೋಜನೆಗಳು ಅತ್ಯುತ್ತಮವಾಗಿವೆ ಎಂದು ಕೇಂದ್ರ ಬುಡಕಟ್ಟು ಕಲ್ಯಾಣ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ ಸಂವಾದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News