ಪ್ರಾಧ್ಯಾಪಕನ ಮೇಲೆ ಹಲ್ಲೆ ಆರೋಪ: ಮಾಜಿ ಹಂಗಾಮಿ ಕುಲಪತಿ ಅಮಾನತು
ಕಲಬುರ್ಗಿ, ಸೆ.4: ಕಲಬುರಗಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಸಹ ಪ್ರಾಧ್ಯಾಪಕನ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿ ಅವರನ್ನು ಅಮಾನತು ಮಾಡಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆ.18 ರಂದು ಹಲ್ಲೆ ಘಟನೆ ಬೆಳಕಿಗೆ ಬಂದಿದ್ದು, ಇದಾದ ಬಳಿಕ ವಿವಿಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಇದೀಗ ಕುಲಸಚಿವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರೊ.ಎಸ್.ಪಿ. ಮೇಲಕೇರಿ ಸಂಬಂಧಿಯೊಬ್ಬರು ಕಲಬುರ್ಗಿ ವಿವಿಯ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಮಾಡುತ್ತಿದ್ದರು. ಪೂರ್ಣಾವಧಿ ಎಂ.ಫಿಲ್ ಮಾಡುವ ಜೊತೆಗೆ ಬೇರೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗೆ ಶಿಷ್ಯವೇತನ ಮಂಜೂರಿಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎಂ. ವಿದ್ಯಾಸಾಗರ್ ಒಪ್ಪಲಿಲ್ಲ ಎಂದು ಹೇಳಲಾಗುತ್ತಿದೆ.
ಇದರಿಂದ ಕುಪಿತಗೊಂಡ ಪ್ರೊ.ಮೇಲಕೇರಿ ಸಸ್ಯಶಾಸ್ತ್ರ ವಿಭಾಗಕ್ಕೆ ತೆರಳಿ, ಮುಖ್ಯಸ್ಥ ಪ್ರೊ.ಜಿ.ಎಂ. ವಿದ್ಯಾಸಾಗರ್ ಮೇಲೆ ಹಲ್ಲೆ ಮಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ತದನಂತರ, ಈ ಕುರಿತಂತೆ ಪ್ರೊ. ವಿದ್ಯಾಸಾಗರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅಧ್ಯಕ್ಷತೆಯಲ್ಲಿ ಸಿಂಡಿಕೇಟ್ ಸಭೆ ನಡೆದಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮೇಲಕೇರಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.