ಮೈಸೂರು: ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ; ಮರ್ಯಾದೆಗೇಡು ಹತ್ಯೆ ಶಂಕೆ

Update: 2020-09-04 16:23 GMT

ಮೈಸೂರು,ಸೆ.4: ಮನೆಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆ ಮೈಸೂರು ತಾಲೂಕು ದೊಡ್ಡ ಕಾನ್ಯ ಗ್ರಾಮದಲ್ಲಿ ನಡೆದಿದ್ದು, ಇದೊಂದು ಮರ್ಯಾದೆಗೇಡು ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.

ಇದೇ ಗ್ರಾಮದ ಮೀನಾಕ್ಷಿ (24) ಸಾವೀಗೀಡಾಗಿರುವ ಯುವತಿ. ಈಕೆ ಇದೇ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಬೇಕು ಎಂದಿದ್ದಕ್ಕೆ ಪೋಷಕರೇ ಬುಧವಾರ ರಾತ್ರಿ ಮಗಳನ್ನು ಹತ್ಯೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಯುವತಿ ಬದುಕಿದ್ದ ವೇಳೆ ಮೇ ತಿಂಗಳಿನಲ್ಲಿ ಒಡನಾಡಿ ಸಂಸ್ಥೆಗೆ ಇಮೇಲ್ ಮೂಲಕ 'ನಾನು ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮನೆಯವರು ಹಿಂಸೆ ನೀಡುತ್ತಿದ್ದಾರೆ' ಎಂಬ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಪರಶು ಪೊಲೀಸರಿಗೆ ಮಾಹಿತಿ ನೀಡಿ ಹುಡುಗಿಯ ಪೋಷಕರನ್ನು ಕರೆಸಿ ಮಾತನಾಡಿದ್ದರು. 'ಹುಡುಗಿ ತನ್ನ ಸಹೋದರಿಯ ಮನೆಗೆ ಹೋಗುವುದಾಗಿ ಹೇಳಿದ್ದರು. ಇದೀಗ ಸಾವಿನ ಸುದ್ದಿ ಕೇಳಿ ಬೇಸರ ವಾಯಿತು' ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಪತ್ರಿಕೆಗೆ ತಿಳಿಸಿದ್ದಾರೆ.

ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಎಂಬುವುದು ತನಿಖೆಯಿಂದ ಹೊರಬರಬೇಕಿದೆ. ಏನೇ ಆದರೂ ಹುಡುಗಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದುದು ಸತ್ಯ. ಹಾಗಾಗಿ ಈ ಸಾವಿಗೆ ಸಾಮಾಜಿಕ ನ್ಯಾಯ ದೊರಕಬೇಕು ಎಂದು ಸ್ಟ್ಯಾನ್ಲಿ ಒತ್ತಾಯಿಸಿದರು.

ಈ ಸಂಬಂಧ ಮೃತ ಮೀನಾಕ್ಷಿ ಸಹೋದರಿ 'ನನ್ನ ತಂಗಿಯ ಸಾವು ಅನುಮಾನಾಸ್ಪದದಿಂದ ಕೂಡಿದೆ' ಎಂದು ಮೈಸೂರು ದಕ್ಷಿಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೊಡ್ಡ ಕಾನ್ಯ ಗ್ರಾಮದಲ್ಲಿ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಈಕೆ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು ಮನೆಯವರ ವಿರೋಧ ಇದೆ ಎಂದು ಕಳೆದ ಮೂರು ತಿಂಗಳ ಹಿಂದೆ ದೂರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಒಂದು ಬಾರಿ ದಕ್ಷಿಣ ಪೊಲೀಸ್ ಠಾಣೆಯ ಡಿವೈಎಸ್ಪಿ ಅವರು ಹುಡುಗಿ ಮತ್ತು ಪೋಷಕರನ್ನು ಕರೆಸಿ ಮಾತನಾಡಿ ತೊಂದರೆ ಕೊಡದಂತೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ನೇಣುಬಿಗಿದ ಸ್ಥಿತಿಯಲ್ಲಿ ಹುಡುಗಿಯ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು.

-ಶಿವಕುಮಾರ್, ಅಡಿಷನಲ್ ಎಸ್ಪಿ, ಮೈಸೂರು ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News