ಮಂಡ್ಯ: ಮಲಗಿದ್ದಲ್ಲೇ ಇಬ್ಬರು ಕೂಲಿ ಕಾರ್ಮಿಕರ ಕೊಲೆ

Update: 2020-09-04 18:25 GMT

ಮಂಡ್ಯ, ಸೆ.4: ಮಲಗಿದ್ದಲ್ಲೇ ಇಬ್ಬರು ಕೂಲಿ ಕಾರ್ಮಿಕರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಯಲಿಯೂರು ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಯಲಿಯೂರು ಸಮೀಪದ ಚಲುವರಾಜ್ ಮಾಲಕತ್ವದ ಮಾರುತಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜು (44) ಹಾಗೂ ರಾಮಮೂರ್ತಿ (46) ಕೊಲೆಯಾದವರು. 

ಬಸವರಾಜು ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದವರಾಗಿದ್ದು, ರಾಮಮೂರ್ತಿ ಮೂಲತಃ ನೆಲಮಂಗಲ ಬಳಿಯ ಮರಳಗುಂಟೆ ಗ್ರಾಮದವರಾಗಿದ್ದಾರೆ. ಇಬ್ಬರೂ ಸುಮಾರು 8 ವರ್ಷಗಳಿಂದ ಈ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಮಲಗುತ್ತಿದ್ದರು. ಶುಕ್ರವಾರ ಬೆಳಗ್ಗೆ  ಇಟ್ಟಿಗೆ ಫ್ಯಾಕ್ಟರಿಗೆ ಹೋದಾಗ ಚಲುವರಾಜ್ ಅವರಿಗೆ ಕೆಲಸಗಾರರ ಜೊಡಿ ಕೊಲೆಯಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಎಸ್ಪಿ ಪರಶುರಾಮ್, ಡಿವೈಎಸ್ಪಿ ನವೀನ್ ಕುಮಾರ್, ಎಸ್ಐ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News