ಮಾದಕ ದ್ರವ್ಯ: ಹತ್ತು ವರ್ಷಗಳಿಂದ ಕೈಗೊಂಡ ಕ್ರಮಗಳೇನು; ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

Update: 2020-09-05 16:21 GMT

ಬೆಂಗಳೂರು, ಸೆ. 5: `ಮಾದಕ ದ್ರವ್ಯ ನಿಷೇಧಿತ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್(ಎನ್‍ಡಿಪಿಎಸ್) ಕಾಯ್ದೆ ಹತ್ತು ವರ್ಷಗಳಿಂದ ತೆಗೆದುಕೊಂಡ ಕಾನೂನು ಕ್ರಮಗಳ ಕುರಿತು ಅತ್ಯಂತ ಜರೂರಾಗಿ ಮಾಹಿತಿ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಹತ್ತು ವರ್ಷಗಳಿಂದ ಎಷ್ಟು ಜನರ ಮೇಲೆ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ? ದಾಖಲಿಸಿದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಯಾವ ಸ್ಥಿತಿಯಲ್ಲಿವೇ? ನ್ಯಾಯಾಲಯಗಳಲ್ಲಿ ಖುಲಾಸೆಯಾದ ಪ್ರಕರಣಗಳೇಷ್ಟು? ಶಿಕ್ಷೆಯಾಗಿದ್ದರೆ, ಎಷ್ಟು ಜನರಿಗೆ ಶಿಕ್ಷೆಯಾಗಿದೆ? ವ್ಯಕ್ತಿವಾರು, ಶಿಕ್ಷೆಯ ಪ್ರಮಾಣವಾರು, ಜಿಲ್ಲಾವಾರು ಮಾಹಿತಿ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ.

ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಸಹಕಾರವಿಲ್ಲದೆ ಗಾಂಜಾ ದಂಧೆ ಇಷ್ಟು ನಿರಾತಂಕವಾಗಿ ನಡೆಯಲು ಸಾಧ್ಯವೇ? ಸಾಧ್ಯವಿಲ್ಲವಾದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಷ್ಟು ಜನರನ್ನು ಅಮಾನತ್ತು ಮಾಡಲಾಗಿದೆ? ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಪ್ರಕರಣವಾರು, ಜಿಲ್ಲಾವಾರು ಮಾಹಿತಿ ನೀಡುವುದು.

ಎನ್‍ಡಿಪಿಎಸ್ ಕಾಯ್ದೆಯ ಪ್ರಕಾರ ವಿವಿಧ ಹಂತದ ಸಮಿತಿಗಳನ್ನು ರಚಿಸಬೇಕು. ಜಿಲ್ಲೆ, ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಎಷ್ಟು ಸಮಿತಿಗಳನ್ನು ರಚಿಸಲಾಗಿದೆ? ಅವುಗಳು ಇದುವರೆವಿಗೆ ಏನು ಕ್ರಮಗಳನ್ನು ಕೈಗೊಂಡಿವೆ? ಎಷ್ಟು ಸಭೆಗಳನ್ನು ನಡೆಸಿವೆ. ಡ್ರಗ್ಸ್ ದುಶ್ಚಟಕ್ಕೆ ಸಿಲುಕಿದ ಮಕ್ಕಳ ತಂದೆ-ತಾಯಿಗಳಿಂದ ಗುಪ್ತವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ರಾಜ್ಯದಲ್ಲಿದೆಯೇ? ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ? ಅವುಗಳ ಕುರಿತು ಇದುವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ? ಡ್ರಗ್ಸ್ ಎಂದು ಕರೆಯುವ ಈ ವಸ್ತುಗಳು ಎಲ್ಲಿಂದ ಸರಬರಾಜಾಗುತ್ತಿವೆ? ರಾಜ್ಯದ ಎಲ್ಲೆಲ್ಲಿಗೆ ಸರಬರಾಜಗುತ್ತಿವೆ? ಸರಬರಾಜುದಾರರ ಎಷ್ಟು ಆಸ್ತಿಗಳನ್ನು ಇದುವರೆಗೆ ಮುಟ್ಟುಗೋಲು ಹಾಕಲಾಗಿದೆ? ಡ್ರಗ್ಸ್ ವ್ಯಸನಕ್ಕೆ ಸಿಕ್ಕಿಕೊಂಡವರಲ್ಲಿ ಎಷ್ಟು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೀರಿ? ಅವರಲ್ಲಿ ಎಷ್ಟು ಜನ ಸಂಪೂರ್ಣವಾಗಿ ವ್ಯಸನದಿಂದ ಮುಕ್ತರಾಗಿದ್ದಾರೆ? ಎಷ್ಟು ಜನ ಮತ್ತೆ ಅದೇ ವ್ಯಸನಕ್ಕೆ ಬಲಿಯಾಗಿದ್ದಾರೆ? ಡ್ರಗ್ಸ್ ವ್ಯಸನದಿಂದಾಗಿ ಮರಣ ಹೊಂದಿದ ವ್ಯಕ್ತಿಗಳೆಷ್ಟು? ಈ ಎಲ್ಲ ವಿವರಗಳನ್ನು ಜಿಲ್ಲಾವಾರು ನೀಡಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News