ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಪರ್ವದ್ದೇ ಸದ್ದು: ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ

Update: 2020-09-06 11:48 GMT

ಬೆಂಗಳೂರು, ಸೆ. 6: `2018-19ನೆ ಸಾಲಿನ ವರದಿ ಆಧಾರದ ಮೇಲೆ ಉದ್ಯಮಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕದ ಸ್ಥಾನ ಕುಗ್ಗಲು, ಹಿಂದೆ ಆಡಳಿತ ನಡೆಸಿದವರ ವೈಫಲ್ಯದ ಫಲ ಎಂಬುದನ್ನು ಅಂಕಿ-ಅಂಶಗಳೇ ಸಾಕ್ಷೀಕರಿಸುತ್ತಿವೆ. ನೆರೆ, ಕೊರೋನ ಹಾವಳಿಗಳ ನಡುವೆಯೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ, ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣಲು ಅವಕಾಶ ನೀಡಿಲ್ಲ' ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಭೂ-ಸುಧಾರಣ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರ ಬದುಕೂ ಹಸನಾಗಬೇಕು, ರಾಜ್ಯಕ್ಕೆ ಸುಲಲಿತ ಬಂಡವಾಳವೂ ಹರಿದು ಬರಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ರೈತ, ಉದ್ದಿಮೆ-ಸ್ನೇಹಿ ದಿಟ್ಟಹೆಜ್ಜೆ ಇರಿಸಿದೆ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಉದ್ದಿಮೆ ವಹಿವಾಟಿನ ಪಟ್ಟಿಯಲ್ಲಿ ದೇಶದಲ್ಲೇ 2ನೆ ಸ್ಥಾನದಲ್ಲಿತ್ತು ಎಂಬುದನ್ನು ನೆನಪಿಸಬಯಸುವೆ' ಎಂದು ವಿಜಯೇಂದ್ರ ತಿಳಿಸಿದ್ದಾರೆ.

`ಎಷ್ಟೇ ಸಂಕಷ್ಟವಿರಲಿ, ಸವಾಲುಗಳಿರಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಪರ್ವದ್ದೇ ಸದ್ದು ಮೊಳಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ `ಸ್ವಾವಲಂಬಿ ಭಾರತ ನಿರ್ಮಾಣ'ದ ಸಂಕಲ್ಪಕ್ಕೆ ಕರ್ನಾಟಕ ಅಗ್ರಶ್ರೇಯಾಂಕದ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತಶೈಲಿ ಬಲ್ಲವರದ್ದಾಗಿದೆ' ಎಂದು ವಿಜಯೇಂದ್ರ ಇಂದಿಲ್ಲಿ ಬಿಜೆಪಿ ಆಡಳಿತವನ್ನು ಬಲವಾಗಿ ಸಮರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News