×
Ad

ಕೋಮುವಾದಿಗಳು, ಜಾತಿವಾದಿಗಳ ಕಪಿಮುಷ್ಠಿಯಿಂದ ಜಾತ್ಯತೀತ ಭಾರತವನ್ನು ಉಳಿಸಬೇಕಿದೆ: ಎಚ್.ಎಚ್.ದೇವರಾಜ್

Update: 2020-09-06 18:02 IST

ಚಿಕ್ಕಮಗಳೂರು, ಸೆ.6: ಜನಪರ ಹೋರಾಟಗಳು ಮತ್ತು ಹೋರಾಟಗಾರರನ್ನು ಹತ್ತಿಕ್ಕುವುದು ಮತ್ತು ದೇಶದ್ರೋಹಿಗಳು, ನಕ್ಸಲೈಟ್‍ಗಳು ಎಂದು ಹಣೆಪಟ್ಟಿ ಕಟ್ಟುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಇಂತಹ ಪಕ್ಷದವರಿಂದ ಈ ದೇಶವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸದ್ಯ ಎದುರಾಗಿದೆ. ಕೋಮುವಾದಿಗಳು, ಜಾತಿವಾದಿಗಳ ಕಪಿಮುಷ್ಠಿಯಿಂದ ಜಾತ್ಯತೀತ ಭಾರತವನ್ನು ಉಳಿಸಲು ಎಲ್ಲರೂ ಸಂಘಟಿತರಾಗುವುದು ಅತ್ಯಗತ್ಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಅಭಿಪ್ರಾಯಿಸಿದರು.

ಶನಿವಾರ ನಗರದ ಆಜಾದ್ ಪಾರ್ಕ್ ವೃತ್ತದ ಆವರಣದಲ್ಲಿ "ನಾವು ಭಾರತೀಯರು, ಭಾರತ ಉಳಿಸಿ" ಆಂದೋಲನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ಆರೆಸ್ಸೆಸ್‍ನ ಕೈಗೊಂಬೆಯಾಗಿರುವ ಬಿಜೆಪಿ ಪಕ್ಷದಿಂದ ಭಾರತ ದೇಶವನ್ನು ರಕ್ಷಿಸಲೇಬೇಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರಕಾರಗಳ ಅವಧಿಯಲ್ಲಿ ಜನಪರ ಹೋರಾಟಗಳು ಮತ್ತು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆದಿವೆ. ಬಡವರು, ಕಾರ್ಮಿಕರು, ರೈತರ ಪರ ಧ್ವನಿ ಎತ್ತುವ ಜನಪರ ಹೋರಾಟಗಾರರನ್ನು ದೇಶದ್ರೋಹಿಗಳು, ನಕ್ಸಲೈಟ್‍ಗಳೆಂದು ಹಣೆಪಟ್ಟಿ ಕಟ್ಟಿ ಹೋರಾಟಗಾರರ ಧ್ವನಿಯನ್ನೇ ಹತ್ತಿಕ್ಕಲಾಗುತ್ತಿದೆ. ಜನಪರವಾದ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಉಳ್ಳವರ ಪರನಾಗಿ ಸರಕಾರಗಳು ಕಾನೂನು ಮಾಡುತ್ತಿವೆ. ದೇಶವನ್ನು ಮಾರುತ್ತಿರುವ ಇಂತಹ ಸರಕಾರಗಳಿಂದ ಭಾರತ ದೇಶವನ್ನು ಭಾರತೀಯರೇ ಉಳಿಸಬೇಕೆಂದು ಕರೆ ನೀಡಿದರು.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಡ್ರಗ್ಸ್ ಮಾಫಿಯಾಕ್ಕೂ ಬಿಜೆಪಿಗೂ ಹತ್ತಿರದ ನಂಟಿದೆ. ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ್ದಾರೆನ್ನಲಾಗಿರುವ ಚಲನಚಿತ್ರ ನಟಿ ರಾಗಿಣಿ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗಿದ್ದಾರೆ. ನಟಿ ರಾಗಿಣಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ. ಇಂತಹ ಅನೈತಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಬಿಜೆಪಿ ಪಕ್ಷದಿಂದ ದೇಶವನ್ನು ಉಳಿಸಿಕೊಳ್ಳಬೇಕಿದ್ದು, ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಬೇಕಿದೆ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಸರಕಾರಗಳಿಂದಾಗಿ ನೈಜ ಭಾರತದ ಅಸ್ತಿತ್ವವೇ ನಾಶವಾಗುತ್ತಿದೆ. ಬಹುಜನರ ಭಾರತ, ಬಹುತ್ವದ ಭಾರತ ಎಂಬುದನ್ನೇ ಇಲ್ಲವಾಗಿಸುವ ಸಂಚು ನಡೆಯುತ್ತಿದೆ. ದಲಿತರು, ಹಿಂದುಳಿದವರು, ಮುಸ್ಲಿಮರು ಈ ದೇಶದವರೇ ಅಲ್ಲ, ವಿದೇಶಗಳಿಂದ ಬಂದವರೆಂದು ಸಂಘಪರಿವಾರದ ರಾಷ್ಟ್ರೀಯ ಮುಖಂಡರು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ. ವಿದೇಶಗಳಿಂದ ಬಂದವರ ಕೈಯಲ್ಲಿ ಸರಕಾರವನ್ನು ನೀಡಿದ್ದರ ಫಲವಾಗಿ ಇಲ್ಲಿನ ಮೂಲನಿವಾಸಿಗಳಿಗೆ ಪೌರತ್ವ ನೀಡಲು ಅವರು ಮುಂದಾಗಿದ್ದಾರೆ. ಇಂತಹವರಿಂದ ಭಾರತವನ್ನು ರಕ್ಷಿಸದಿದ್ದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೂ ಉಳಿಗಾಲ ಇರುವುದಿಲ್ಲ ಎಂದು ಎಚ್ಚರಿಸಿದರು.

ಹಿಂದೆ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಇಂದಿನ ಸರಕಾರಗಳ ನೀತಿಗಳಿಂದಾಗಿ ದೇಶ ಮಾರಾಟವಾಗುವುದನ್ನು ತಪ್ಪಿಸಲು ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಯಬೇಕಾಗಿರುವುದು ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವದ ನಾಶಕ್ಕೆ ಮುಂದಾಗಿರುವ ಸಂಘಪರಿವಾರ ಮತ್ತು ಕೋಮುವಾದಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಎಲ್ಲರೂ ಸಿದ್ಧರಾಗಬೇಕಿದೆ ಎಂದು ರಾಧಾಕೃಷ್ಣ ಕರೆ ನೀಡಿದರು.

"ನಾವು ಭಾರತೀಯರು, ಭಾರತ ಉಳಿಸಿ" ಆಂದೋಲನದ ಸಂಚಾಲಕ ಗೌಸ್ ಮೊಹಿದ್ದೀನ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಸಮುದಾಯದ ಜನರು ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಶೃಂಗೇರಿ ಶಂಕರಾಚಾರ್ಯ ಮೂರ್ತಿ ಘಟನೆ ಮುಂದಿಟ್ಟುಕೊಂಡು ಮಾಜಿ ಸಚಿವ ಜೀವರಾಜ್ ಘಟನೆಯನ್ನು ಒಂದು ಸಮುದಾಯದವರ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಅವರು ಜಿಲ್ಲೆಯಲ್ಲಿ ಕೋಮು ಸೌಹಾರ್ದವನ್ನು ಹದಗೆಡಿಸಿ ರಾಜಕೀಯ ಮಾಡುವ ಸಂಚು ರೂಪಿಸಿದ್ದರು. ಇಂತಹ ಕೋಮುವಾದಿಗಳಿಂದ ದೇಶವನ್ನು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಕರ್ತವ್ಯವಾಗಿದೆ ಎಂದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರಗಳು, ಜನಪರವಾಗಿದ್ದ ಭೂಸುಧಾರಣಾ ಕಾಯ್ದೆ, ಕಾರ್ಮಿಕರ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ದೇಶವನ್ನು ಶ್ರೀಮಂತರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಎಲ್ಲೆಡೆ ಜನಾಕ್ರೋಶ ಎದ್ದರೂ ಸರಕಾರಗಳು ಉಳ್ಳವರ ಪರನಾದ ನಿಲುವು ತೋರಿವೆ. ಆರೆಸ್ಸೆಸ್ ತನ್ನ ಅಜೆಂಡಾವನ್ನು ಬಿಜೆಪಿ ಪಕ್ಷದ ಮೂಲಕ ಜಾರಿ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಜ್ಮತ್ ಪಾಶ, ಮುಸ್ಲಿಂ ಮುಖಂಡ ನಸ್ರುಲ್ಲಾ ಶರೀಫ್, ಕರವೇ ಜಯಪ್ರಕಾಶ್, ಬಿಎಸ್ಪಿ ಮುಖಂಡ ಪರಮೇಶ್, ದಸಂಸ ಮುಖಂಡ ರಾಜರತ್ನಂ, ಯೂಸೂಫ್ ಹಾಜಿ ಮತ್ತಿತರರ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್, ಜಮೀರ್, ಕೃಷ್ಣಮೂರ್ತಿ, ನೀಲಗುಳಿ ಪದ್ಮನಾಭ, ಬ್ಯಾರಿ ಯೂನಿಯನ್‍ನ ಹಮೀದ್ ಪಾಶ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News